ಕೊಯಮತ್ತೂರು( ತಮಿಳುನಾಡು): ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಬಸ್ ನಿಲ್ದಾಣದಲ್ಲಿ ನಿಂತಿದ್ದವರಿಗೆ ಗುದ್ದಿದ ಪರಿಣಾಮ ಆರು ಮಂದಿ ಸಾವಿಗೀಡಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಯಮ್ಮತ್ತೂರಿನ ಸುಂದರಪುರಂನಲ್ಲಿ ಬುಧವಾರ ನಡೆದಿದೆ.
ಇಂದು ಬೆಳಗ್ಗೆ ಸುಮಾರು 9.30ರ ಸಮಯದಲ್ಲಿ ಈ ಘಟನೆ ನಡೆದಿದೆ. ಬಿಳಿ ಬಣ್ಣದ ಎಸ್ಯುವಿ ಆಡಿ ಕಾರು ಪೊಲ್ಲಾಚಿಯಿಂದ ಕೊಯಮ್ಮತೂರು ಕಡೆ ಬರುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದ ಪೆರಿಯಾರ್ ಬಸ್ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಏಕಾಏಕಿ ಆಟೋ ರಿಕ್ಷಾಗೆ ಗುದ್ದಿದೆ.
ಆ ನಂತರ ಕಾರು ಹೂವಿನ ಅಂಗಡಿ ಹಾಗೂ ವಿದ್ಯುತ್ ಕಂಬಕ್ಕೂ ಅಪ್ಪಳಿಸಿದ್ದು, ಪೆರಿಯಾರ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದವರ ಕಡೆಗೂ ನುಗ್ಗಿದೆ. ಮೃತರಲ್ಲಿ ನಾಲ್ವರು ಪುರುಷರು ಹಾಗೂ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ. ಮೃತರನ್ನು ಸೋಮು(55), ಸುರೇಶ್(43), ಹಂಸವೇಣಿ(30), ಸುಭಾಶಿನಿ(20), ಶ್ರೀರಂಗದಾಸ್(75) ಹಾಗೂ ಕುಪ್ಪಮ್ಮಲ್(60) ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ಘಟನಾ ವೇಳೆ ಆಟೋ ಒಳಗಡೆ ಇದ್ದರು.
ಜಿಲ್ಲಾ ಪೊಲೀಸ್ ಆಯುಕ್ತ ಪೆರಿಯಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಡ್ರಂಕ್ ಅಂಡ್ ಡ್ರೈವ್ ಪರೀಕ್ಷಿಸಲು ಚಾಲಕ ಜಗದೀಶನ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹರಿಹರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
Comments are closed.