
ಅಹಮದಾಬಾದ್: ಪತ್ನಿ ತನ್ನ ಗಂಡ ಮೊಬೈಲ್ ಬಳಸದಂತೆ ನೋಡಿಕೊಳ್ಳುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ, ವ್ಯಕ್ತಿಯೋರ್ವನಿಗೆ ಜಾಮೀನು ಸಿಕ್ಕಿದ ಘಟನೆ ಗುಜರಾತ್ನ ವಿಸ್ನಾಗರದಲ್ಲಿ ನಡೆದಿದೆ.
ಮಹಿಳೆಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದ ಪೊಲೀಸರು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಜಾಮೀನು ಅರ್ಜಿ ಸಲ್ಲಿಸಿದ ಆರೋಪಿಗೆ ಮೊಬೈಲ್ ಬಳಕೆ ಮಾಡಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ. ಅಷ್ಟೇ ಅಲ್ಲ, ಆರೋಪಿಯ ಪತ್ನಿ ಇದಕ್ಕೆ ಜವಾಬ್ದಾರಿ ಎಂದು ಮುಚ್ಚಳಿಕೆ ಬರೆಸಿ, ಜಾಮೀನು ಅಂಗೀಕರಿಸಿದೆ.
ಪ್ರಕರಣ ಏನು?
ಅಹಮದಾಬಾದ್ನ ವಿಸ್ನಾನಗರದಲ್ಲಿ ನೆಲೆಸಿದ್ದ ವ್ಯಕ್ತಿಯೋರ್ವ, ಅಪರಿಚಿತ ಮೊಬೈಲ್ ನಂಬರ್ಗೆ ಅಸಭ್ಯ ಮೆಸೇಜ್ಗಳನ್ನು ಕಳಿಸುತ್ತಿದ್ದ. ಈ ನಂಬರ್ನ್ನು ಮಹಿಳೆಯೋರ್ವಳು ಬಳಕೆ ಮಾಡುತ್ತಿದ್ದಳು. ಸಂದೇಶಗಳ ಕಾಟ ತಡೆಯಲಾಗದೆ, ವಿಸ್ನಾಗರದ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪೊಲೀಸರು ಆಕೆಯ ಮೊಬೈಲ್ನಿಂದಲೇ ವ್ಯಕ್ತಿಗೆ ಭೇಟಿ ಮಾಡುವಂತೆ ಸಂದೇಶ ಕಳಿಸಿದ್ದರು. ಗಾಂಧೀನಗರದಲ್ಲಿನ ಸ್ಥಳವೊಂದಕ್ಕೆ ಕರೆಯಲಾಗಿತ್ತು. ಕಾರಿನಲ್ಲಿ ಬಂದ ವ್ಯಕ್ತಿಗೆ, ಪೊಲೀಸರು ಹೊಂಚು ಹಾಕಿರುವುದು ತಿಳಿದು ಅಲ್ಲಿಂದ ಪರಾರಿಯಾಗಿದ್ದಾನೆ. ಈ ವೇಳೆ ಕಾರಿನ ನೋಂದಣಿ ಸಂಖ್ಯೆ ಮೂಲಕ ವಿವರ ಪಡೆದ ಪೊಲೀಸರು, ಆತನನ್ನು ಬಂಧಿಸಿದ್ದಾರೆ.
ಆರೋಪ ಪಟ್ಟಿ ಸಲ್ಲಿಸುವ ವರೆಗೆ ಸ್ಮಾರ್ಟ್ಫೋನ್ ಬಳಕೆ ಮಾಡಬಾರದು ಎಂದು ಷರತ್ತು ಬದ್ಧ ಜಾಮೀನು ನೀಡಿದೆ. ಇದಲ್ಲದೆ ಆರೋಪಿ ಮೊಬೈಲ್ ಬಳಕೆ ಮಾಡದಂತೆ ನೋಡಿಕೊಳ್ಳುವುದು ಪತ್ನಿಯ ಜವಾಬ್ದಾರಿಯಾಗಿರುತ್ತದೆ. ಈ ಬಗ್ಗೆ ಮುಚ್ಚಳಿಕೆ ಬರೆಸುವಂತೆಯೂ ಕೋರ್ಟ್ ಆದೇಶಿಸಿದೆ.
Comments are closed.