ನವದೆಹಲಿ: ತಮ್ಮ ವಿವಾದಿತ ಹೇಳಿಕೆಗಳ ಮೂಲಕವೇ ದೇಶಾದ್ಯಂತ ಸದಾ ಚರ್ಚೆಯಲ್ಲಿರುವ ಬಿಜೆಪಿ ನಾಯಕ, ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಮಾತು ಈಗ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಕಡೆಗೆ ತಿರುಗಿದೆ. ” ಕುಮಾರಸ್ವಾಮಿ ಅವರು ಹೆಚ್ಚು ದಿನ ನೋವು ಪಡಬೇಕಾದ ಅಗತ್ಯವಿಲ್ಲ. ಸಮಸ್ಯೆಗಳು ಬೇಗ ಬಗೆಹರಿಯಲಿವೆ,” ಎಂದು ಅವರು ಹೇಳಿಕೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ನಾನು ವಿಷವುಂಡು ಅಮೃತ ನೀಡುತ್ತಿದ್ದೇನೆ. ಒಂದು ವರ್ಗ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದೆ ಎನ್ನುವ ಮೂಲಕ ಇತ್ತೀಚೆಗೆ ಜೆಡಿಎಸ್ ಪಕ್ಷದ ಸಮಾರಂಭವೊಂದರಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದ ಕುಮಾರಸ್ವಾಮಿ ಅವರಿಗೆ ಸ್ವಾಮಿ ಅವರು ಮಾರ್ಮಿಕವಾಗಿ ಈ ಮಾತು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐಗೆ ಜತೆ ಮಾತನಾಡಿರುವ ಸ್ವಾಮಿ ” ಮುಖ್ಯಮಂತ್ರಿ ಆಗಬೇಕೆಂಬ ಕುಮಾರಸ್ವಾಮಿ ಅವರ ಕನಸು ನಿಜವಾಗಿದೆ. ಆದರೆ ಅವರು ದೀರ್ಘ ಕಾಲದ ವರೆಗೆ ಸಂತೋಷದಿಂದ ಇರಲು ಸಾಧ್ಯವಿಲ್ಲ. ಅತಿ ಶೀಘ್ರದಲ್ಲೇ ಎಲ್ಲವೂ ಬದಲಾಗಲಿದೆ. ಒಂದು ವೇಳೆ ಅಮಿತ್ ಶಾ ಅವರು ನನ್ನನ್ನು ಕರ್ನಾಟಕಕ್ಕೆ ಕಳುಹಿಸಿ ಸರ್ಕಾರ ರಚನೆ ಮಾಡುವಂತೆ ಸೂಚಿಸಿದರೆ ನಾನು ಸಂತೋಷವಾಗಿ ಆ ಕೆಲಸ ಮಾಡುತ್ತೇನೆ” ಎಂದಿದ್ದಾರೆ.
” ಹೀಗಾಗಿ ಕಾಂಗ್ರೆಸ್ ಪಕ್ಷ ಹತಾಶೆಗೊಂಡಿದೆ. ವಿರೋಧ ಪಕ್ಷಗಳ್ಯಾವುವೂ ಅವರ ಜತೆಗಿಲ್ಲ. ಅದೇ ಕಾರಣಕ್ಕೇ ಅದು ದೊಡ್ಡ ಸಮಸ್ಯೆಗೆ ಸಿಲುಕಿದೆ. ಕರ್ನಾಟಕದಲ್ಲಿ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲಿನ ಸನ್ನಿವೇಶ ಹೇಗೆ ಬದಲಾಯಿತು ಎಂಬುದನ್ನು ಜನ ನೋಡಿದ್ದಾರೆ. ಕಾಂಗ್ರೆಸ್ ನಾಯಕರು ಒಂದು ಕಡೆ ದೇವಸ್ಥಾನಗಳಿಗೆ ಭೇಟಿ ಕೊಡುತ್ತಾರೆ. ಒಂದು ಕಡೆ ಮುಸ್ಲಿಮರನ್ನು ಬೆಂಬಲಿಸುವುದಾಗಿ ಘೋಷಿಸುತ್ತಾರೆ. ಇದೇ ಕಾರಣಕ್ಕೆ ಅವರು ಅಪಮಾನಕ್ಕೆ ಗುರಿಯಾಗುತ್ತಿದ್ದಾರೆ,” ಎಂದರು.
Comments are closed.