ರಾಷ್ಟ್ರೀಯ

ಮಂದ್‌ಸೌರ್ ಸಾಮೂಹಿಕ ಅತ್ಯಾಚಾರ: ನಿಮ್ಮನ್ನು ದಂಗುಬಡಿಸುತ್ತದೆ ಸಂತ್ರಸ್ತ ಮಗುವಿನ ಆತ್ಮಸ್ಥೈರ್ಯ

Pinterest LinkedIn Tumblr


ಇಂದೋರ್: ಆಕೆ ಇನ್ನು 7 ವರ್ಷ ವಯಸ್ಸಿನ ಹಾಲುಗಲ್ಲದ ಮಗು. ಏನನ್ನೂ ಅರಿಯದ ಈ ವಯಸ್ಸಲ್ಲಿ ಆಕೆಯ ಮೇಲೆರಗಿದ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದರು. ಕತ್ತು ಸೀಳಿದರು. ಅಷ್ಟೇ ಅಲ್ಲ ನರಳಿ ಸಾಯಲಿ ಎಂದು ಕಾಡಲ್ಲಿ ಎಸೆದರು. ಇಷ್ಟೆಲ್ಲ ನಡೆದರೂ ಪುಟ್ಟ ಮಗು ಬದುಕುಳಿದಿದೆ. ಸಾವು ಬದುಕಿನ ನಡುವಿನ ಹೋರಾಟದಲ್ಲಿ ಸಾವನ್ನು ಗೆದ್ದಿರುವ ದಿಟ್ಟ ಬಾಲಕಿಯ ಕಥೆ ಇದು.

ಮಂದಸೌರ್ ಅತ್ಯಾಚಾರದ ಬಲಿಪಶು ಬಾಲಕಿ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು ಮಾತನಾಡಲು ಆರಂಭಿಸಿದ್ದಾಳೆ.

ಮಗುವನ್ನು ಆಘಾತದಿಂದ ಹೊರತರಲು ಆಪ್ತಸಮಾಲೋಚನೆ ನಡೆಸಲು ಪ್ರಯತ್ನಿಸಿದ ವೈದ್ಯರು ಮತ್ತು ಆಪ್ತ ಸಮಾಲೋಚಕರು ಆಕೆಯ ಧೈರ್ಯ ಮತ್ತು ಸ್ಥಿರತೆಯನ್ನು ನೋಡಿ ದಂಗಾಗಿ ಹೋಗಿದ್ದಾರೆ. ತನ್ನ ಜತೆ ನಡೆದ ಭಯಾನಕ, ಘೋರ ಅನ್ಯಾಯದ ಬಗ್ಗೆ ಆಕೆ ಬಾಯಿ ಬಿಡುತ್ತಿಲ್ಲ. ಅದನ್ನು ನೆನಪಿಸಿಕೊಳ್ಳುತ್ತಲೂ ಇಲ್ಲ. ಬದಲಾಗಿ ವಯೋ ಸಹಜ ಮಾತನಾಡುವ ಮೂಲಕ ಅತ್ಯಾಚಾರ, ಮಾರಣಾಂತಿಕ ಹಲ್ಲೆಯನ್ನು ಲೆಕ್ಕಿಸದೇ ಸ್ಥೈರ್ಯದ ಪ್ರತಿಮೂರ್ತಿಯಾಗಿ ಕಾಣುತ್ತಿದ್ದಾಳೆ.

ಮಗುವಿನ ಜತೆ ಡಾಕ್ಟರ್ ಸ್ವಾತಿ ಪ್ರಸಾದ್ ಮತ್ತು ಡಾಕ್ಟರ್ ಭಾಸ್ಕರ್ ಪ್ರಸಾದ್ 30 ನಿಮಿಷದ ಸಂಭಾಷಣೆ ನಡೆಸಿದ್ದು, ಬಾಲಕಿ ಮತ್ತು ಆಕೆಯ ಪೋಷಕರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ತನಗಿಷ್ಟವಾದ ಟಿವಿ ಶೋ, ಸಂಗೀತ, ಆತ್ಮೀಯ ಸ್ನೇಹಿತರ ಬಗ್ಗೆ ಮಾತನಾಡುವ ಬಾಲಕಿ, ಸ್ನೇಹಿತೆಯರ ಜತೆ ಆಟವಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬೇಸರ ವ್ಯಕ್ತ ಪಡಿಸಿದ್ದಾಳೆ.

“ಮೊದಲ ಆಪ್ತ ಸಮಾಲೋಚನೆಯಲ್ಲಿ ಡಾಕ್ಟರ್ ಸ್ವಾತಿ ಜತೆ ಆಕೆ, ಆಸ್ಪತ್ರೆಯಲ್ಲಿರುವುದರಿಂದ ತನಗಿಷ್ಟವಾದ ಟಿವಿ ಧಾರಾವಾಹಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಳು. ಆಕೆಯ ಮೇಲೆ ನಡೆದ ಅತ್ಯಾಚಾರ ಬಗ್ಗೆ ಇನ್ನು ನಾವು ಮಾತನಾಡಿಲ್ಲ. ಆಕೆ ಮಾನಸಿಕ ಆಘಾತಕ್ಕೊಳಗಾಗಿಲ್ಲದಿರುವುದು ನಮ್ಮೆಲ್ಲರನ್ನು ಚಕಿತಗೊಳಿಸಿದೆ. ಈಗ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾಳೆ. ಆಕೆಯಲ್ಲಿನ ಮಾನಸಿಕ ಸ್ಥಿರತೆ ನಿಜಕ್ಕೂ ಶ್ಲಾಘನೀಯ. ಕಾಳಜಿ, ಬೆಂಬಲ ಮತ್ತು ಪ್ರೀತಿಯಿಂದ ಆಕೆ ತ್ವರಿತವಾಗಿ ಸಹಜ ಸ್ಥಿತಿಗೆ ಮರಳುವಂತೆ ಮಾಡಬೇಕಿದೆ”, ಎಂದು ಡಾಕ್ಟರ್ ಭಾಸ್ಕರ್ ಮಗುವಿನ ಪೋಷಕರಿಗೆ ಸಲಹೆ ನೀಡಿದ್ದಾರೆ.

Comments are closed.