ರಾಷ್ಟ್ರೀಯ

ಸಾಲಗಾರರ ಕಾಟದಿಂದ ಬೇಸತ್ತು ತಾಯಿಯನ್ನೇ ಹತ್ಯೆ ಮಾಡಿದ!

Pinterest LinkedIn Tumblr


ಹೈದರಾಬಾದ್: ಸಾಲಗಾರರ ಕಾಟದಿಂದ ಬೇಸತ್ತ ಯುವಕನೋರ್ವ ತನ್ನ ತಾಯಿಯನ್ನೇ ಹತ್ಯೆ ಮಾಡಿರುವ ಪ್ರಕರಣ ಹೈದಾರಾಬಾದ್‌ನ ಯೆಲ್ಲರೆಡ್ಡಿಗುಡದಲ್ಲಿ ವರದಿಯಾಗಿದೆ.

ಯೆಲ್ಲರೆಡ್ಡಿಗುಡದ ಕೆಬಿಆರ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಮಮತಾ ಮತ್ತು ಆಕೆಯ ಪತಿ ಶ್ರೀನಿವಾಸ್ ವಾಸವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಮಗನಿದ್ದಾನೆ.

ಮಮತಾ ಮೊದಲು ಶ್ರೀನಿವಾಸ್ ಪಾಲಕರು ಮತ್ತು ಸಹೋದರರ ಜತೆಯಲ್ಲಿ ವಾಸವಿದ್ದರು. ಆದರೆ ಆ ಸಂದರ್ಭದಲ್ಲಿ ಸ್ವಂತ ಉದ್ಯಮ ನಡೆಸಲು ಯತ್ನಿಸಿ ಕೈಸುಟ್ಟುಕೊಂಡಿದ್ದರು. ಉದ್ಯಮದಲ್ಲಿ ಉಂಟಾದ ನಷ್ಟ ಮತ್ತು ಸಾಲವನ್ನು ಕುಟುಂಬ ಸದಸ್ಯರು ತುಂಬಿಕೊಟ್ಟಿದ್ದರು. ಅದಾದ ಬಳಿಕ ಮಮತಾ ಮತ್ತೊಂದು ಬಾರಿ ಉದ್ಯಮ ಮಾಡಲು ಯತ್ನಿಸಿದ್ದು, ಅದಕ್ಕೆ ಕುಟುಂಬದ ಒಡವೆ ಬಳಸಿಕೊಂಡಿದ್ದರು. ಹೀಗಾಗಿ ಅವರನ್ನು ಕುಟುಂಬ ಸದಸ್ಯರು ದೂರವಿಟ್ಟಿದ್ದರು.

ಅದಾದ ಬಳಿಕ ಮಮತಾ ಮತ್ತು ಶ್ರೀನಿವಾಸ್ ಯೆಲ್ಲರೆಡ್ಡಿಗುಡಕ್ಕೆ ಹೋಗಿ, ಅಲ್ಲಿ ವಾಸವಿದ್ದರು. ಅಲ್ಲಿ ಮತ್ತೆ ಮಮತಾ ಚಿಟ್‌ಫಂಡ್ ಉದ್ಯಮ ಆರಂಭಿಸಿ ನಷ್ಟ ಉಂಟಾಗಿತ್ತು. ಅದರಲ್ಲಿ ನಷ್ಟ ಉಂಟಾಗಿದ್ದರಿಂದ, ಹೂಡಿಕೆದಾರರು ಹಣ ವಾಪಸ್ ಮಾಡುವಂತೆ ಒತ್ತಾಯಿಸಿ ಮನೆಗೆ ಬರುತ್ತಿದ್ದರು. ಈ ಮಧ್ಯೆ ಸಾಲಗಾರರ ಕಾಟ ತಡೆಯಲಾರದೆ ಮಮತಾ ತನ್ನ ಸಹೋದರನ ಮನೆಗೆ ಹೋಗಿದ್ದರು. ಆದರೆ ಅಲ್ಲಿಂದ ಸಹೋದರ ವಾಪಸ್ ಮಮತಾರನ್ನು ಶ್ರೀನಿವಾಸ್ ಬಳಿ ಕಳುಹಿಸಿದ್ದರು.

ದಂಪತಿ ಪುತ್ರ ಮದನ್ ಗುರುವಾರ ರಾತ್ರಿ ಪಾರ್ಟಿಗೆ ತೆರಳಿ ಮದ್ಯ ಸೇವಿಸಿದ್ದು, ಮನೆಗೆ ಮರಳಿದಾಗ ತಾಯಿ ಮನೆಯಲ್ಲಿದ್ದದ್ದು ಕಂಡು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಸಾಲಗಾರರು ಹಣ ವಾಪಸ್ ಕೇಳುತ್ತಿದ್ದಾರೆ ಎಂದು ಕೋಪಗೊಂಡಿದ್ದ ಮದನ್, ತಾಯಿ ಮತ್ತೆ ಮನೆಗೆ ವಾಪಸ್ ಬಂದಿದ್ದು ಕಂಡು ಜಗಳವಾಡಿ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಎಸ್‌ ಆರ್ ನಗರ ಪೊಲೀಸರು, ಮದನ್ ಮತ್ತು ಶ್ರೀನಿವಾಸ್‌ರನ್ನು ಬಂಧಿಸಿದ್ದಾರೆ.

Comments are closed.