ರಾಷ್ಟ್ರೀಯ

ಗುಂಪೊಂದರಿಂದ ಮಕ್ಕಳ ಕಳ್ಳರೆಂದು ಭಾವಿಸಿ ಥಳಿತ: ಭಿಕ್ಷುಕಿ ಸಾವು

Pinterest LinkedIn Tumblr


ಅಹಮದಾಬಾದ್: ಮಕ್ಕಳ ಕಳ್ಳರೆಂದು ಭಾವಿಸಿ ಭಿಕ್ಷುಕರ ಗುಂಪೊಂದನ್ನು ಸಾರ್ವಜನಿಕರು ಅಟ್ಟಾಡಿಸಿ ಹೊಡೆದಿದ್ದು, ತೀವ್ರ ಗಾಯಗೊಂಡ ಭಿಕ್ಷುಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಪ್ರಕರಣ ಗುಜರಾತ್‌ನ ವಡಾಜ್‌ನಲ್ಲಿ ವರದಿಯಾಗಿದೆ.

ಮಂಗಳವಾರ ಸಂಜೆ ವಡಾಜ್ ಪ್ರದೇಶಕ್ಕೆ ಭಿಕ್ಷೆ ಬೇಡಲು ಗುಂಪಿನಲ್ಲಿ ತೆರಳಿದ್ದ ಮೆಲ್ದಿ ಮಾತಾ ನಾ ಛಾಪ್ರಾ ಪ್ರದೇಶದ 45 ವರ್ಷದ ಭಿಕ್ಷುಕಿ ಶಾಂತಾದೇವಿ ನಾಥ್ ಎಂಬಾಕೆ ಸಾರ್ವಜನಿಕರ ಆಕ್ರೋಶಕ್ಕೆ ಬಲಿಯಾದವಳು.

ಗುಜರಾತ್‌ನ ಕೆಲವು ಪ್ರದೇಶಗಳಲ್ಲಿ ಮಕ್ಕಳನ್ನು ಅಪಹರಿಸುವ ಗುಂಪು ಸಕ್ರೀಯವಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದು ಸಾರ್ವಜನಿಕರ ಕೃತ್ಯಕ್ಕೆ ಕಾರಣವಾಗಿದೆ. ಭಿಕ್ಷುಕರನ್ನು ಕಂಡ ಕೂಡಲೇ ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ನಂತರ ಕೋಲು, ದೊಣ್ಣೆಯಿಂದ ಹೊಡೆದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಶಾಂತಾದೇವಿ ತೀವ್ರ ಗಾಯಗೊಂಡು ಕುಸಿದು ಬಿದ್ದಿದ್ದಳು.

ತಕ್ಷಣವೇ ಆಕೆ ಮತ್ತು ಗಾಯಗೊಂಡಿದ್ದ ಇತರ ಮೂವರು ಭಿಕ್ಷುಕಿಯರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

Comments are closed.