ಮುಜಫರನಗರ, ಉತ್ತರ ಪ್ರದೇಶ : ಇಲ್ಲಿನ ಗುಜರಿ ಅಂಗಡಿಯೊಂದರಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ನ್ಪೋಟಕ್ಕೆ ಇಬ್ಬರು ದಾರಿಹೋಕರು ಸೇರಿದಂತೆ ನಾಲ್ವರು ಬಲಿಯಾಗಿದ್ದು ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶರ್ವತ್ ರೋಡ್ ಪ್ರದೇಶದಲ್ಲಿನ ಗುಜರಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ ತತ್ಕ್ಷಣವೇ ಗುಜರಿ ನಿರ್ವಹಿಸುತ್ತಿದ್ದ ತಜೀಮ್ (50) ಮತ್ತು ಶಝಾದ್ (55) ಎಂಬವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ವೇಳೆಯೇ ಆ ದಾರಿಯಾಗಿ ನಡೆದುಕೊಂಡು ಹೋಗುತ್ತಿದ್ದ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ಪೊಲೀಸ್ ಸುಪರಿಂಟೆಂಡೆಂಟ್ (ನಗರ) ಒಂವೀರ್ ಸಿಂಗ್ ತಿಳಿಸಿದರು.
ಇನ್ನೂ ಮೂವರು ಪಾದಚಾರಿಗಳು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ.
ಅಂಗಡಿಯಲ್ಲಿ ಗುಜರಿ ವಸ್ತುಗಳನ್ನು ಒಡೆಯುತ್ತಿದ್ದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿರುವುದಾಗಿ ಸರ್ಕಲ್ ಪೊಲೀಸ್ ಆಫೀಸರ್ ಹರೀಶ್ ಭಡೋರಿಯಾ ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದೊಡನೆಯೇ ಪೊಲೀಸರು ಮತ್ತು ಅಗ್ನಿ ಶಾಮಕದಳದವರು ಸ್ಥಳಕ್ಕೆ ಧಾವಿಸಿ ಬಂದು ರಕ್ಷಣಾ ಕಾರ್ಯ ಕೈಗೊಂಡರು.
ಸ್ಫೋಟ ನಡೆದ ತಾಣವನ್ನು ಈಗ ಮುಚ್ಚಲಾಗಿದ್ದು ತನಿಖೆ ನಡೆಯುತ್ತಿದೆ. ನ್ಪೋಟಕ್ಕೆ ಕಾರಣವಾದ ವಸ್ತು ಯಾವುದೆಂಬುದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.