ರಾಷ್ಟ್ರೀಯ

ಜನಪರ ಕೆಲಸ ಮಾಡುತ್ತಿರುವ ಕೇಂದ್ರದ ವಿರುದ್ಧ ಕಾಂಗ್ರೆಸ್ ಸುಳ್ಳು ಹಬ್ಬಿಸುವ ಮೂಲಕ ಗೊಂದಲ ಸೃಷ್ಟಿಸುತ್ತಿದೆ: ಮೋದಿ

Pinterest LinkedIn Tumblr

ಭೋಪಾಲ್: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಮ್ಮ ಸರ್ಕಾರ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಸುಳ್ಳುಗಳನ್ನು ಹಬ್ಬಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇಂದು ಮಧ್ಯ ಪ್ರದೇಶದ ರಾಜಗಢ್ ಜಿಲ್ಲೆಯಲ್ಲಿ ಮೋಹನಪುರ್ ನೀರಾವರಿ ಯೋಜನೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಜನತೆಗೆ ನಮ್ಮ ಸರ್ಕಾರ ಮತ್ತು ಬಿಜೆಪಿ ಮೇಲೆ ನಂಬಿಕೆ ಇದೆ. ಸುಳ್ಳು ಹರಡುವವರನ್ನು, ಗೊಂದಲ ಸೃಷ್ಟಿಸುವವರನ್ನು ಮತ್ತು ನಿರಾಶಾವಾದಿಗಳನ್ನು ನಂಬುವುದಿಲ್ಲ ಎಂದರು.

ದೇಶವನ್ನು ಅತಿ ಹೆಚ್ಚು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಗೆ ಯಾವತ್ತೂ ಜನತೆಯನ್ನು ಮತ್ತು ಅವರ ಕಠಿಣ ಶ್ರಮದ ಬಗ್ಗೆ ನಂಬಿಕೆ ಇಲ್ಲ. ಅಲ್ಲದೆ ದೇಶದ ಸಾಮರ್ಥ್ಯದ ಬಗ್ಗೆಯೂ ಅವರಿಗೆ ನಂಬಿಕೆ ಇಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಯಾವತ್ತೂ ನಿರಾಶೆ ಬಗ್ಗೆ ಮಾತನಾಡಿಲ್ಲ. ನಾವು ಆತ್ಮ ವಿಶ್ವಾಸದಿಂದ ಮುಂದೆ ಸಾಗುತ್ತಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಧ್ಯ ಪ್ರದೇಶವನ್ನು ಬಿಮಾರು ರಾಜ್ಯ ಎಂದು ಕರೆಯಲಾಗುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆ ಟ್ಯಾಗ್ ತೆಗೆದು ಹಾಕಲು ಸಾಕಷ್ಟು ಕೆಲಸ ಮಾಡಿದೆ ಎಂದರು.

Comments are closed.