ರಾಷ್ಟ್ರೀಯ

ಕೋಮು ಸಾಮರಸ್ಯ ಸಾರಲು ಅಯೋಧ್ಯೆಯ 500 ವರ್ಷ ಹಳೆಯದಾದ ಸರಯೂ ಕುಂಜ್ ದೇವಾಲಯದಲ್ಲಿ ಇಫ್ತಾರ್ ಕೂಟ

Pinterest LinkedIn Tumblr


ಅಯೋಧ್ಯೆ: ಕೋಮು ಸಾಮರಸ್ಯ ಸಾರುವ ಉದ್ದೇಶದಿಂದ ವಿವಾದಿತ ರಾಮ ಜನ್ಮಭೂಮಿ ಅಯೋಧ್ಯೆಯ 500 ವರ್ಷ ಹಳೆಯದಾದ ಸರಯೂ ಕುಂಜ್ ದೇವಾಲಯದಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.

ರಾಮ ಜನ್ಮಭೂಮಿಯಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟಕ್ಕೆ ಯಾವುದೇ ರಾಜಕೀಯ ವ್ಯಕ್ತಿ ಅಥವಾ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸದೆ, ಸಾಮಾನ್ಯ ಜನರನ್ನು ಆಹ್ವಾನಿಸಿರುವುದು ವಿಶೇಷವಾಗಿತ್ತು. ‘ಇಫ್ತಾರ್ ಕೂಟ ಆಯೋಜನೆಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಅಯೋಧ್ಯೆಯ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ಸಾರಲು ಬಯಸುತ್ತೇವೆ’ ಎಂದು ಸೂರ್ಯ ಕುಂಜ್ ಮಹಾಂತ್ ಜುಗಲ್ ಕಿಶೋರ್ ಶರಣ್ ಶಾಸ್ತ್ರಿ ತಿಳಿಸಿದ್ದಾರೆ.

ಉಭಯ ಸಮುದಾಯದ ಅಂತರ ಸೇತುವೆ ಕಟ್ಟಲು ಯತ್ನಿಸಬೇಕು

ಈ ದೇವಾಲಯ ಭಗವಾನ್ ಶ್ರೀ ರಾಮ, ಸೀತೆ ಹಾಗೂ ಬ್ರಹ್ಮ ದೇವರ ವಿಗ್ರಹಗಳನ್ನು ಹೊಂದಿದೆ. ಅಯೋಧ್ಯೆಯ ಸುಪ್ರಸಿದ್ಧ ಹನುಮಾನ್‌ ದೇವಾಲಯದಲ್ಲಿಯೂ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ವಿವಿಧ ದೇವಸ್ಥಾನಗಳ ಸಾಧುಗಳು ಮುಸ್ಲಿಂ ಬಾಂಧವರಿಗೆ ಖರ್ಜೂರ, ಲಾಡು ವಿತರಿಸಿದರು. ಬಳಿಕ ದೇವಾಲಯದ ಆವರಣದಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟರು.

ಇದಕ್ಕೂ ಮುನ್ನ, ದೇವಸ್ಥಾನದಲ್ಲಿ ಕೋಮುವಾದದ ವಿರುದ್ಧ ಸೆಮಿನಾರ್ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ಕಾಲೇಜುಗಳ ಶಿಕ್ಷಕರು ಭಾಗವಹಿಸಿದ್ದರು. ಈ ವೇಳೆ ಕೋಮು ಸಾಮರಸ್ಯೆ ಕಾಯ್ದುಕೊಳ್ಳುವ ಪ್ರತಿಜ್ಞೆ ಮಾಡಿಸಲಾಯಿತು.

ಇದೇ ಮೊದಲ ಬಾರಿ ಈ ದೇವಾಲಯದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಹನುಮಾನ್ ದೇವಸ್ಥಾನದ ಅರ್ಚಕ ಮಹಾಂತ್ ಜ್ಞಾನ್ ದಾಸ್ ಅವರು ಹಲವು ಬಾರಿ ಇಫ್ತಾರ್ ಕೂಟ ಆಯೋಜಿಸಲು ಪ್ರಯತ್ನಿಸಿದ್ದರು. ಆದರೆ, ಆಂತರಿಕ ಪ್ರತಿರೋಧದ ಹಿನ್ನೆಲೆಯಲ್ಲಿ ಇಫ್ತಾರ್ ಕೂಟ ಕೈಬಿಟ್ಟಿದ್ದರು.

‘ಉಭಯ ಸಮುದಾಯಗಳ ನಡುವಿನ ಅಂತರ ತಗ್ಗಿಸುವ ಪ್ರಯತ್ನ ಮಾಡಬೇಕೆಂದು ಭಾವಿಸಿದ್ದೇವೆ. ಮುಸ್ಲಿಮ ಬಾಂಧವರಿಗಾಗಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಶಾಂತಿ ಸಂದೇಶ ರವಾನಿಸಲು ನಿರ್ಧರಿಸಿದ್ದೇವೆ’ ಎಂದು ಮಹಾಂತ್ ರಘಶರಣ್ ದಾಸ್ ತಿಳಿಸಿದ್ದಾರೆ.

‘ಅಯೋಧ್ಯೆಯಲ್ಲಿ ನಾವು ಅಲ್ಪಸಂಖ್ಯಾತರಾಗಿದ್ದರೂ ಅಭದ್ರತೆ ಕಾಡಿಲ್ಲ. ಮುಸ್ಲಿಂ ಸಮುದಾಯದವರನ್ನು ಅಣ್ಣ-ತಮ್ಮಂದಿರಂತೆ ಕಾಣುವ ಹಿಂದೂ ಬಾಂಧವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಉರ್ದು ಕವಿ ಮುಜಾಮ್ಮಿಲ್ ತಿಳಿಸಿದ್ದಾರೆ.

Comments are closed.