ರಾಷ್ಟ್ರೀಯ

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿರಿಯರಿಗೆ ಸ್ಪರ್ಧಿಸಲು ಅವಕಾಶ !

Pinterest LinkedIn Tumblr

ನವದೆಹಲಿ: ಬಿಜೆಪಿ ಹಿರಿಯ ಮುಖಂಡರು ಚುನಾವಣೆಯಲ್ಲಿ ಸ್ಪರ್ಧೆ ನಡೆಸದಂತೆ ಹೇರಲಾಗಿದ್ದ ಅಘೋಷಿತ ನಿಷೇಧವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತೆರವುಗೊಳಿಸಿದ್ದಾರೆ.

ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಪಕ್ಷದ ಹಿರಿಯ ನಾಯಕರ ಮೇಲೆ ಹೇರಲಾಗಿದ್ದ ಚುನಾವಣಾ ಸ್ಪರ್ಧೆ ಮೇಲಿನ ನಿಷೇಧವನ್ನು ತೆರವುಗೊಳಿಸಿರುವುದಾಗಿ ಘೋಷಣೆ ಮಾಡಿದರು. ಈ ಹಿಂದೆ ಪಕ್ಷದಲ್ಲಿ 75 ವರ್ಷ ದಾಟಿದ ಹಿರಿಯ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಪಕ್ಷದ ಈ ನಿರ್ಣಯದಿಂದಾಗಿ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಶತೃಘ್ನ ಸಿನ್ಹಾ, ಕರಿಯಾ ಮುಂಡಾ ಮತ್ತು ಸುಮಿತ್ರಾ ಮಹಾಜನ್ ರಂತಹ ಹಿರಿಯ ನಾಯಕರು ಚುನಾವಣಾ ಕಣದಿಂದ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಗಿತ್ತು.

ಈ ಹಿಂದೆ 2014ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಬಿಜೆಪಿ ಹಿರಿಯ ನಾಯರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಹಲವು ಹಿರಿಯ ನಾಯಕರನ್ನು ಅವರ ವಯಸ್ಸಿನ ನೆಪವೊಡ್ಡಿ ಚುನಾವಣಾ ಸ್ಪರ್ಧೆಯಿಂದ ದೂರವಿಡಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಮೋದಿ ಅಲೆಯಲ್ಲಿ ತೇಲುತ್ತಿದ್ದ ಬಿಜೆಪಿಗೆ ಉಪ ಚುನಾವಣೆಗಳ ಸಾಲು ಸಾಲು ಸೋಲು ಆತಂಕ ಮೂಡಿಸಿದೆ. ಪ್ರಮುಖವಾಗಿ ಉತ್ತರ ಪ್ರದೇಶ ಲೋಕಸಭಾ ಉಪ ಚುನಾವಣೆಗಳು ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆ ಸೋಲು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಲ್ಲದೆ ಈ ಹಿಂದೆ ಪ್ರಕಟವಾಗಿದ್ದ ಚುನಾವಣಾ ಸಮೀಕ್ಷೆಗಳೂ ಕೂಡ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಥಾನಗಳು ಕುಸಿತವಾಗುವ ಕುರಿತು ಹೇಳಿದ್ದವು. ಇದೇ ಕಾರಣಕ್ಕೆ ಬಿಜೆಪಿ ಇದೀಗ ತನ್ನ ಹಿರಿಯ ಮುಖಂಡರುಗಳನ್ನು ಕಣಕ್ಕಿಳಿಸುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕುರಿತು ತಂತ್ರಗಾರಿಕೆ ರೂಪಿಸುತ್ತಿದೆ.

Comments are closed.