ರಾಷ್ಟ್ರೀಯ

ಅನ್ಯಧರ್ಮೀಯ ಯುವತಿ ಪ್ರೀತಿಸಿದ್ದಕ್ಕೆ ಹತ್ಯೆ: ತಂದೆಯಿಂದ ಶಾಂತಿ ಸಂದೇಶ

Pinterest LinkedIn Tumblr


ಹೊಸದಿಲ್ಲಿ: ಅನ್ಯಧರ್ಮೀಯ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಹತ್ಯೆಯಾದ ಅಂಕಿತ್ ಸಕ್ಸೇನಾ ನಿಮಗೆ ನೆನಪಿರಬೇಕು. ಪುತ್ರನ ಅಗಲಿಕೆಯಿಂದ ನೊಂದಿದ್ದರೂ, ಸಾಮರಸ್ಯದ ಸಂದೇಶವನ್ನು ಬಿತ್ತುವ ಮಹಾನ್ ಕೆಲಸವನ್ನು ಮಾಡುತ್ತಿದ್ದಾರೆ ಅವರ ತಂದೆ ಯಶಪಾಲ್ ಸಕ್ಸೇನಾ . ಆ ಮೂಲಕ ಅಗಲಿದ ಪುತ್ರನ ಆತ್ಮಕ್ಕೆ ಶಾಂತಿ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.

ಕಳೆದ ಕೆಲ ದಿನಗಳಿಂದ ಚಾಲ್ತಿಯಲ್ಲಿರುವ ರಮ್ಜಾನ್‌ ಮಾಸದ ಈ ಶುಭ ಸಂದರ್ಭದಲ್ಲಿ ನೆರೆಹೊರೆಯವರ ಜತೆ ಸೇರಿಕೊಂಡು ಇಫ್ತಿಯಾರ್ ಆಯೋಜಿಸುತ್ತಿದ್ದಾರೆ ಯಶಪಾಲ್. ಈ ಮೂಲಕ ಮಗನಿಗೆ ಗೌರವ ಸಲ್ಲಿಸುತ್ತಿದ್ದು, ಆತ ಆರಂಭಿಸಿದ್ದ ಸಾಮರಸ್ಯದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಪುಟ್ಟ ಪ್ರಯತ್ನ ನನ್ನದೆನ್ನುತ್ತಿದ್ದಾರೆ ಈ ನೊಂದ ತಂದೆ.

ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದ ಅಂಕಿತ್ ಸಕ್ಸೇನಾ ಫೆಬ್ರವರಿ 1ರಂದು ಹತ್ಯೆಯಾಗಿದ್ದ. ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಯುವತಿ ಕಡೆಯವರು ಅಂಕಿತ್ ಕತ್ತು ಕತ್ತರಿಸಿ ಕೊಂದಿದ್ದರು.

ಹತ್ಯೆಯ ನಂತರ ಕೋಮುದಳ್ಳುರಿ ಹೊತ್ತಿ ಉರಿಯುವ ಸನ್ನಿವೇಶ ನಿರ್ಮಾಣವಾದರೂ, ಬಲಿಪಶುವಿನ ತಂದೆ ಯಶಪಾಲ್ ಶಾಂತಿ ಕಾಪಾಡುವಂತೆ ಕರೆ ನೀಡಿದ್ದರು ಮತ್ತು ಮರಣವನ್ನು ಕೋಮುವಾದೀಕರಿಸಬಾರದು ಎಂದು ಕೋರಿದ್ದರು.

ಮಗನ ಸ್ಮರಣಾರ್ಥ ಟ್ರಸ್ಟ್ ಸ್ಥಾಪಿಸಲು ನೆರವಾಗಿರುವ ಸ್ವಯಂ ಸೇವಾ ಸಂಸ್ಥೆ ಸದಸ್ಯರು ಮತ್ತು ನೆರೆಹೊರೆಯವರ ಸಹಾಯದೊಂದಿಗೆ ಯಶಪಾಲ್ ಇಫ್ತಿಯಾರ್‌ಗಾಗಿ ಆಹಾರವನ್ನು ತಯಾರಿಸುತ್ತಿದ್ದಾರೆ.

ಅಂಕಿತ್ ಹುಟ್ಟುಹಬ್ಬದ ದಿನವಾದ ಮಾರ್ಚ್ 22ರಂದು ಸಹ ‘ಶಾಂತಿಪಥ’ ಮತ್ತು ‘ಹವನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊಲೆಯಾದ ಜಾಗದಲ್ಲಿ ತುಳಸಿ ಗಿಡವನ್ನು ನೆಡಲಾಯ್ತು. ಸಮಾಜಕ್ಕೆ ಪ್ರೀತಿಯ ಸಂದೇಶವನ್ನು ಸಾರುವ ಉದ್ದೇಶದಿಂದ ಅಂಕಿತ್ ಕುಟುಂಬ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆಯನ್ನು ನಡೆಸಲಾಯಿತು.

Comments are closed.