ರಾಷ್ಟ್ರೀಯ

ಜಾತಿ ತಾರತಮ್ಯ ಆತ್ಮಹತ್ಯೆಗೆ ಪ್ರೇರೇಪಿಸಿತ್ತು ಎಂದ ದಲಿತ ಸಂತ

Pinterest LinkedIn Tumblr


ಅಲಹಾಬಾದ್: ಬದುಕಿನುದ್ದಕ್ಕೂ ಸಾಕಷ್ಟು ಬಾರಿ ಜಾತಿ ತಾರತಮ್ಯವನ್ನು ಎದುರಿಸಿದ್ದೇನೆ, ಇದು ನನ್ನನ್ನು ಆತ್ಮಹತ್ಯೆ ಕಡೆಗೆ ಮುಖ ಮಾಡಲು ಪ್ರೇರೇಪಿಸಿತ್ತು ಎಂದು ದಲಿತ ಸಂತ ಕನೈಯ್ಯ ಪ್ರಭು ಹೇಳಿದ್ದಾರೆ. ಜುನು ಅಖಾರಾದ ಮೊದಲ ದಲಿತ ‘ಮಹಾಮಂಡಲೇಶ್ವರ’ ಎಂಬ ಹೆಗ್ಗಳಿಕೆ ಅವರದು.

ವಿಜಯ ಕರ್ನಾಟಕ ಸಹೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾದ ವರದಿಗಾರರ ಜತೆ ಮಾತನ್ನಾಡುತ್ತಿದ್ದ, ಪ್ರಭು, ಜನ ನನ್ನ ಜಾತಿಯನ್ನು ಬಳಸಿ ನಿಂದನೆ ಮಾಡುವಾಗ ಹಲವು ಬಾರಿ ಆತ್ಮಹತ್ಯೆ ವಿಚಾರ ತಲೆಯಲ್ಲಿ ಸುಳಿದಾಡಿತ್ತು. ಈ ಅನುಭವವಾಗಿರೋದು ಕೇವಲ ಒಂದೋ ಎರಡೋ ಬಾರಿ ಅಷ್ಟೇ ಅಲ್ಲ. ನನ್ನ ಸಂಪೂರ್ಣ ಜೀವನ ಇಂಥ ಇಂತಹ ಅವಮಾನಕರ ಪ್ರಸಂಗಗಳಿಂದ ತುಂಬಿದೆ ಎಂದು ಖೇದದಿಂದ ನುಡಿದಿದ್ದಾರೆ.

ಇದೇ ತಾರತಮ್ಯ, ಅವಮಾನವೇ ನನ್ನನ್ನು ಸಂಸ್ಕೃತ ಮತ್ತು ಜ್ಯೋತಿಷ್ಯವನ್ನು ಕಲಿಯಲು ಪ್ರೇರೇಪಿಸಿತು, ಎಂದವರು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ತಾವು ಎತ್ತರಕ್ಕೇರಿದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಕನೈಯ್ಯ ಕುಮಾರ ಕಶ್ಯಪ್ ಎಂಬುದು ಅವರ ಜನ್ಮನಾಮ. ಕಾಯಿಪಲ್ಲೆ ವ್ಯಾಪಾರಿಯಾಗಿದ್ದ ತಂದೆಯ ಆದಾಯ ನಾಲ್ಕು ಜನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲದಾಗಿತ್ತು. ಹೀಗಾಗಿ ಕನೈಯ್ಯ 7 ನೇ ವಯಸ್ಸಿಗೆ ದಿನಗೂಲಿಯಾಗಿ ಕೆಲಸ ಮಾಡ ಹತ್ತಿದ್ದರು.

ಚಿಕ್ಕಂದಿನಿಂದಲೇ ನಿರಂತರವಾಗಿ ಜಾತಿ ನಿಂದನೆಗೊಳಗಾದ ಅವರು ಇದೇ ಕಾರಣಕ್ಕೆ ಜ್ಯೋತಿಷ್ಯವನ್ನು ಕಲಿತರಂತೆ. “ನನ್ನ ಹಣೆಬರಹ ಏನೆಂಬುದನ್ನು ತಿಳಿದುಕೊಳ್ಳ ಬಯಸಿದೆ. ನನ್ನೊಳಗಿನ ನನ್ನ ಬಗ್ಗೆ ಮತ್ತು ದೇವರ ಅಸ್ತಿತ್ವದ ಬಗ್ಗೆ ಎದ್ದ ಪ್ರಶ್ನೆಗಳು ಆಧ್ಯಾತ್ಮದ ಕಡೆಗೆ ನನ್ನ ಸೆಳೆದವು. ಹದಿಹರೆಯದಿಂದ ನಾನು ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಲೇ ಬಂದಿದ್ದೇನೆ. 2013ರಲ್ಲಿ “ಜ್ಯೋತಿಷ್ಯ ವಿಶಾರದ” (ಜ್ಯೋತಿಷ್ಯದಲ್ಲಿ ಸ್ನಾತಕೋತ್ತರ) ಪದವಿ ಪಡೆದ ಬಳಿಕ ನನ್ನ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿತು,” ಎನ್ನುತ್ತಾರೆ ಪ್ರಭು.

“ನಾನು ಜಾತಿ ಆಧಾರಿತ ತಾರತಮ್ಯವನ್ನು ತೊಡೆದು ಹಾಕಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಕೆಳವರ್ಗದ ಮಕ್ಕಳಿಗಾಗಿ ಉಚಿತ ಶಿಕ್ಷಣ ಒದಗಿಸುವ ಇರಾದೆಯೂ ನನಗಿದೆ,” ಎಂದು ಕನೈಯ್ಯ ಪ್ರಭು ಹೇಳಿದ್ದಾರೆ.

Comments are closed.