ನವದೆಹಲಿ: ಮೊಬೈಲ್ ತಡವಾಗಿ ತಲುಪಿಸಿದ್ದಕ್ಕೆ ಮಹಿಳೆಯೊಬ್ಬಳು ಡೆಲಿವರಿ ಬಾಯ್ ಮೇಲೆ 20 ಬಾರಿ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ನವದೆಹಲಿಯ ನಿಹಾರ್ ವಿಹಾಲ್ ಬಳಿ ನಡೆದಿದೆ.
ಮಹಿಳೆಯಿಂದ ಹಲ್ಲೆಗೊಳಗಾದ ಯುವಕ ಹೆಸರು ಕೇಶವ್. ಆನ್ ಲೈನ್ ಶಾಪಿಂಗ್ ತಾಣಾ ಪ್ಲಿಪ್ ಕಾರ್ಟ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಕಮಲ್ ದೀಪ್ 11 ಸಾವಿರ ರೂ. ಬೆಲೆಯ ಮೊಬೈಲ್ ಬುಕ್ ಮಾಡಿದ್ದಳು. ಇದಾದ ನಾಲ್ಕು ದಿನಗಳ ಬಳಿಕ ಕೇಶವ್ ಮೊಬೈಲ್ ಮನೆಗೆ ತಲುಪಿಸಲು ತೆರಳಿದ ವೇಳೆ ಘಟನೆ ನಡೆದಿದೆ.
ಕೇಶವ್ ಮನೆಗೆ ತೆರಳಿದ ಮರು ಕ್ಷಣದಲ್ಲಿ ಆತನನ್ನು ಬಲವಂತವಾಗಿ ಮನೆ ಒಳಗೆ ಎಳೆದ ಆಕೆ ಆತನ ಮೇಲೆ ಚಾಕುವಿನಿಂದ 20 ಬಾರಿ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಕಮಲ್ ದೀಪ್ ಸಹೋದರ ಜಿತೇಂದರ್ ಸಹ ಕೃತ್ಯಕ್ಕೆ ಸಹಕಾರ ನೀಡಿದ್ದು, ಇಬ್ಬರು ಸೇರಿ ಶೂ ಲೇಸ್ನಿಂದ ಕೇಶವ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಕೇಶವ್ ಪ್ರಜ್ಞೆತಪ್ಪಿ ಮನೆಯಲ್ಲೇ ಕುಸಿದು ಬಿದಿದ್ದಾನೆ.
ಸ್ವಲ್ಪ ಸಮಯದ ಬಳಿಕ ಕೇಶವ್ ಬಳಿ ಇದ್ದ 40 ಸಾವಿರ ಹಣ ಹಾಗೂ ಡೆಲಿವರಿ ನೀಡಲು ತಂದಿದ್ದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ನಂತರ ಬೈಕ್ ಮೂಲಕ ಆತನನ್ನು ಚಂದನ್ ವಿಹಾರ್ ಪ್ರದೇಶದ ಕೊಳಚೆ ನೀರು ಕಾಲುವೆಗೆ ಎಸೆದಿದ್ದಾರೆ.
ಈ ವೇಳೆ ಕೊಳಚೆ ನೀರು ಪೈಪ್ ನಿಂದ ರಕ್ತ ಬರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ಕೇಶವ್ ನನ್ನು ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಥಮ ಚಿಕಿತ್ಸೆ ಬಳಿಕ ಘಟನೆ ಕುರಿತು ಕೇಶವ್ ನಿಂದ ಮಾಹಿತಿ ಪಡೆದ ಪೊಲೀಸರು ಆರೋಪಿ ಕಮಲ್ ದೀಪ್ ಹಾಗೂ ಜಿತೇಂದರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೇ ನೀಡಿರುವ ಫ್ಲಿಪ್ ಕಾರ್ಟ್ ಸಂಸ್ಥೆ ತನ್ನ ಸಂಸ್ಥೆಯ ಡೆಲಿವರಿ ಬಾಯ್ ಮೇಲೆ ನಡೆದಿರುವ ಹಲ್ಲೆ ದೃಢಪಡಿಸಿದೆ. ಅಲ್ಲದೇ ಆತನ ಆರೋಗ್ಯದ ಚಿಕಿತ್ಸೆಯ ವೆಚ್ಚ ಹಾಗೂ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದೆ.
Comments are closed.