ರಾಷ್ಟ್ರೀಯ

ನೂರು ಕೋಟಿ ಆಸ್ತಿ ಬಿಟ್ಟು ಯುವಕನ ಸಂನ್ಯಾಸ ದೀಕ್ಷೆ

Pinterest LinkedIn Tumblr


ಅಹಮದಾಬಾದ್: ಚಾರ್ಟೆಡ್ ಅಕೌಂಟ್ ಪೂರ್ಣಗೊಳಿಸಿರುವ ಯುವಕನೊಬ್ಬ ಸುಮಾರು ನೂರು ಕೋಟಿ ಆಸ್ತಿಯನ್ನು ಬಿಟ್ಟು ಸಂನ್ಯಾಸ ದೀಕ್ಷೆ ಸ್ವೀಕರಿಸಲು ಸಿದ್ಧನಾಗಿದ್ದಾನೆ. ಗುಜರಾತ್ ಮೂಲಕ ಮೋಕ್ಷೇಶ್ ಶಾ (24) ಕುಟುಂಬಿಕರು ಅಲ್ಯೂಮಿನಿಯಂ ವ್ಯಾಪಾರ ಮಾಡುತ್ತಾ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ವಾಸವಾಗಿದ್ದಾರೆ. ಇವರ ವಾರ್ಷಿಕ ಆದಾಯ ಸುಮಾರು 100 ಕೋಟಿ ರೂ.ವರೆಗೂ ಇದೆಯಂತೆ.

ವ್ಯಾಪಾರದ ಪಾಲುದಾರರಾಗಿರುವ ಮೋಕ್ಷೇಶ್ ಏಪ್ರಿಲ್ 20 ರಂದು ಸಂನ್ಯಾಸ ದೀಕ್ಷೆ ಸ್ವೀಕರಿಸುತ್ತಿದ್ದಾರೆ. ದೀಕ್ಷೆ ಸ್ವೀಕರಿಸುವುದಕ್ಕೂ ಮುನ್ನ ಏಪ್ರಿಲ್ 19ರಂದು ಮೋಕ್ಷೇಶ್‍ರನ್ನು ಮೆರವಣಿಗೆ ಮಾಡಲಾಗುತ್ತದೆ. ಅಹಮದಾಬಾದ್ ಸಮೀಪದ ಅಮಿಯಾಪೂರ್‌ನಲ್ಲಿನ ತಪೋವಲ್ ಸಂಸ್ಕಾರ್‌ಪೀಠ್ ಗುರು ರತ್ನ ಮುನಿರಾಜ್ ಜಿನ್ ಪ್ರೇಮ್‌ವಿಜಯಾಜಿ ಮಹಾರಾಜ್‌ರಿಂದ ಮೋಕ್ಷೇಶ್ ದೀಕ್ಷೆ ಸ್ವೀಕರಿಸಲಿದ್ದಾರೆ.

ವಿಶೇಷ ಎಂದರೆ ಅವರ ಕುಟುಂಬದಿಂದ ಸಂನ್ಯಾಸ ದೀಕ್ಷೆ ಸ್ವೀಕರಿಸುತ್ತಿರುವ ಮೊದಲ ವ್ಯಕ್ತಿ ಇವರು. ಈ ಬಗ್ಗೆ ಮೋಕ್ಷೇಶ್ ಮಾತನಾಡುತ್ತಾ, ‘ಹಣದಿಂದ ಎಲ್ಲಾ ಖರೀದಿಸುವಂತಿದ್ದರೆ ಶ್ರೀಮಂತರು ತುಂಬಾ ಸಂತೋಷವಾಗಿ ಇರುತ್ತಾರೆ. ಶಾಶ್ವತ ಆನಂದ ಪಡೆಯಬೇಕಾದರೆ ಕೆಲವನ್ನು ಬಿಡಬೇಕಾಗುತ್ತದೆ. ಸಿಎ ಪೂರ್ಣಗೊಳಿಸಿ ವ್ಯಾಪಾರ ನಿರ್ವಹಣೆಯಲ್ಲಿ ಎರಡು ವರ್ಷಗಳ ಕಾಲ ಪಾಲುದಾರನಾಗಿದ್ದ ನಾನು ಯಾವುದೇ ರೀತಿ ಸಂತೃಪ್ತಿ ಪಡೆಯಲಿಲ್ಲ ಎಂದು ಗ್ರಹಿಸಿ, ದೀಕ್ಷೆಯನ್ನು ಸ್ವೀಕರಿಸಿ ಜೈನ ಸಂನ್ಯಾಸಿಯಾಗಿ ಬದಲಾಗಬೇಕೆಂದು ನಿರ್ಧರಿಸಿದೆ’ ಎಂದಿದ್ದಾರೆ.

ದೀಕ್ಷೆ ಸ್ವೀಕರಿಸಲು ತಂದೆತಾಯಿ ಅನುಮತಿ ತೆಗೆದುಕೊಂಡಿದ್ದೀರಾ ಎಂದು ಕೇಳಿದರೆ, ಕಳೆದ ವರ್ಷ ತಾನು ದೀಕ್ಷೆ ಸ್ವೀಕರಿಸುತ್ತೇನೆಂದು ನಿರ್ಧಾರಿಸಿಕೊಂಡಾಗ ತಂದೆತಾಯಿ ಬೇಡ ಎಂದರು. ಈ ವರ್ಷ ಸ್ವೀಕರಿಸುವಂತೆ ಸಲಹೆ ನೀಡಿದ್ದಾರೆ ಎಂದಿದ್ದಾರೆ. ಮೋಕ್ಷ ಮಾರ್ಗ ಅಂತಿಮ ವಿಷಯ, ಆದರೆ ಜೀವನದಲ್ಲಿ ಇತರರಿಗೂ ಸಹಾಯ ಮಾಡಬೇಕು. ಯಾವಾಗಲೂ ಇತರರಿಗೆ ಸಹಾಯ ಮಾಡಬೇಕೆಂದು ಜೈನ ತೀರ್ಥಂಕರು ಸಹ ಹೇಳಿದ್ದಾರೆಂದು ಮೋಕ್ಷೇಶ್ ಹೇಳುತ್ತಾರೆ.

Comments are closed.