ರಾಷ್ಟ್ರೀಯ

ದಯಾಮರಣದ ಐತಿಹಾಸಿಕ ತೀರ್ಪಿಗೆ ಕಾರಣವಾದ ಕನ್ನಡತಿಯ ಕರುಣಾಜನಕ ಕಥೆ

Pinterest LinkedIn Tumblr


ಹೊಸದಿಲ್ಲಿ: ದಯಾಮರಣವನ್ನು ಕಾನೂನುಬದ್ಧಗೊಳಿಸುವ ಸಂಬಂಧ ಸುಪ್ರೀಂ ಕೋರ್ಟ್‌ ಶುಕ್ರವಾರ ನೀಡಿರುವ ಐತಿಹಾಸಿಕ ತೀರ್ಪಿಗೆ ಕಾರಣವಾದದ್ದು ಕನ್ನಡತಿ ಅರುಣಾ ಶಾನಭಾಗ್‌ ಕರುಣಾಜನಕ ಕಥೆ.

ಬದುಕು ಮತ್ತು ಸಾಯುವ ಎರಡೂ ಅವಕಾಶಗಳಿಂದ ವಂಚಿತರಾದರೂ, ಮರಣಕ್ಕಾಗಿ ಪರಿತಪಿಸುತ್ತಿರುವ ಅದೆಷ್ಟೋ ಅಸಹಾಯಕ ರೋಗಿಗಳ ಪಾಲಿಗೆ ಆಕೆ ಅರುಣಾ ಶಾನಭಾಗ್‌ ‘ದಯಾಮರಣ’ದ ವರದಾನವನ್ನು ಕಲ್ಪಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠವು ತೀರ್ಪಿನಲ್ಲಿ ಅರುಣಾ ಪ್ರಕರಣವನ್ನೂ ಉಲ್ಲೇಖಿಸಿದೆ.

ನರ್ಸ್‌ ಆಗಿ ಕಾರ್ಯನಿರ್ವಹಿಸಿದ ಮುಂಬಯಿನ ಆಸ್ಪತ್ರೆಯಲ್ಲೇ, ಸುಮಾರು 42 ವರ್ಷಗಳ ಕಾಲ ಹಾಸಿಗೆ ಮೇಲೆ ಜೀವಚ್ಛವದಂತೆ ಬದುಕಿದ ಅರುಣಾ ಅವರ ದುಸ್ಥಿತಿಯೇ ದೇಶದಲ್ಲಿ ದಯಾಮರಣದ ಕುರಿತಾದ ಚರ್ಚೆಗಳನ್ನು ತೀವ್ರಗೊಳಿಸಿ, ಕೊನೆಗೆ ಅದನ್ನು ಕಾನೂನುಬದ್ಧಗೊಳಿಸುವ ಸಂಬಂಧ ಸರಕಾರ ಗಂಭೀರವಾಗಿ ಗಮನ ಹರಿಸುವಂತೆ ಮಾಡಿತು.

ದಯಾಮರಣದ ಕುರಿತು ಮಾರ್ಗದರ್ಶಕ ಸೂತ್ರಗಳನ್ನು ರೂಪಿಸುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಮಾರ್ಗದರ್ಶನ ನೀಡಲು ಮುಖ್ಯವಾಗಿ ಕಾರಣವಾಗಿದ್ದು ದಯಾಮರಣ ಸಿಗದೆ ಕರುಣಾಜನಕ ಸ್ಥಿತಿಯಲ್ಲಿ ಕೊನೆಯುಸಿರೆಳೆದ ಅರುಣಾ ಶಾನುಭಾಗ್‌ ಪ್ರಕರಣ.

ದಯಾಮರಣ ನಿರಾಕರಣೆ: ಮುಂಬಯಿನ ಕೆಇಎಂ ಆಸ್ಪತ್ರೆಯಲ್ಲಿ ಸುಮಾರು 4 ದಶಕಗಳಿಗೂ ಹೆಚ್ಚು ಕಾಲ ಅಕ್ಷರಶಃ ಜೀವಚ್ಛವದಂತೆ ಬದುಕಿದ್ದ ಅರುಣಾ ಅವರ ದಯಾಮರಣ ಕೋರಿ 2009ರಲ್ಲೇ ಪಿಂಕಿ ವಿರಾನಿ ಎಂಬ ಪತ್ರಕರ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಶಾನುಭಾಗ್‌ ಅವರಿಗೆ ಮರಣಕಾರಕ ಔಷಧ ನೀಡಿ ಅವರ ದುಸ್ಥಿತಿಗೆ ಅಂತ್ಯ ಹಾಡಬೇಕೆಂದು (ನೇರ ದಯಾಮರಣ) ಅರ್ಜಿಯಲ್ಲಿ ಕೋರಲಾಗಿತ್ತು. ಎರಡು ವರ್ಷಗಳ ಬಳಿಕ ಈ ಬಗ್ಗೆ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ ನೇರ ದಯಾಮರಣಕ್ಕೆ ನಿರಾಕರಿಸಿತ್ತಾದರೂ, ಔಷಧೋಪಚಾರಗಳ ಸ್ಥಗಿತದ ಮೂಲಕ ದಯಾಮರಣಕ್ಕೆ (ಪರೋಕ್ಷ) ಅವಕಾಶ ಕಲ್ಪಿಸಿತ್ತು. ಆದರೆ, ಕೆಇಎಂ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ನರ್ಸ್‌ಗಳು ಈ ತೀರ್ಪು ವಿರೋಸಿ ಮೇಲ್ಮನವಿ ಸಲ್ಲಿಸಿದ್ದರು. ಕೊನೆಗೆ ಸುಪ್ರೀಂ ಕೋರ್ಟ್‌ ದಯಾಮರಣ ನಿರಾಕರಿಸಿ ತೀರ್ಪು ನೀಡಿತ್ತು. ಇದೇ ದುಸ್ಥಿತಿಯಲ್ಲಿ ಇನ್ನೂ ಮೂರುವರ್ಷ ಬದುಕಿದ ಶಾನುಭಾಗ್‌ ಅವರು 2015ರಲ್ಲಿ ನ್ಯುಮೋನಿಯಾದಿಂದ ಕೊನೆಯುಸಿರೆಳೆದರು.

ಆದರೆ, ದಯಾಮರಣ ನಿರಾಕರಿಸಿದ ಸುಪ್ರೀಂ ಕೋರ್ಟ್‌ನ ತೀರ್ಪು ಕುರಿತ ಭಾರಿ ಚರ್ಚೆಗಳಿಗೆ ಕಾರಣವಾಗಿತ್ತು.

ಅರುಣಾ ಕರುಣಾಜನಕ ಕಥೆ

* ಅರುಣಾ ಶಾನುಭಾಗ್‌ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಮದವರು. ಮುಂಬಯಿನ ಕಿಂಗ್‌ ಎಡ್ವರ್ಡ್‌ ಮೆಮೋರಿಯಲ್‌ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು.

* 1973ರ ನ.27ಅರುಣಾ ಅವರ ಜೀವನ ಒಂದು ದುರಂತದ ತಿರುವು ಪಡೆಯಿತು. ಆಸ್ಪತ್ರೆಯ ವಾರ್ಡ್‌ ಕ್ಲೀನರ್‌ ಆಗಿದ್ದ ಸೋಹನ್‌ಲಾಲ್‌ ವಾಲ್ಮೀಕಿ, ಆಸ್ಪತ್ರೆಯ ಬೇಸ್‌ಮೆಂಟ್‌ನಲ್ಲಿ ಅರುಣಾ ಮೇಲೆ ಅತ್ಯಾಚಾರವೆಸಗಿದ್ದ. ಈ ವೇಳೆ ನಾಯಿಯನ್ನು ಕಟ್ಟಿಹಾಕುವ ಸರಪಳಿಯನ್ನು ಕತ್ತಿಗೆ ಬಿಗಿದ ಪರಿಣಾಮ, ಅರುಣಾ ಅವರ ಮೆದುಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡು, ಮೆದುಳು ನಿಷ್ಕ್ರಿಯಗೊಂಡಿತ್ತು.

* ಕಾಣದ ಕಣ್ಣು, ಕೇಳದ ಕಿವಿ, ಬಾರದ ಮಾತು, ಕೈಕಾಲು ಸೇರಿದಂತೆ ದೇಹದ ಬಹುತೇಕ ಅಂಗಾಂಗಳು ನಿಷ್ಕ್ರಿಯ, ಗ್ರಹಿಕೆ, ಸ್ಪಂದನೆ ಇಲ್ಲದ ಸ್ಥಿತಿ, ಬದುಕಿದ್ದಷ್ಟು ದಿನವೂ ಕೊಳವೆ ಮೂಲಕ ಆಹಾರ, ನೀರು ಪೂರೈಕೆ, ಮಾನವನ ದೈನಂದಿನ ಸಹಜ ಚಟುವಟಿಕೆಗಳಾವುವನ್ನೂ ಮಾಡಲಾಗದ ಸ್ಥಿತಿಯಲ್ಲಿ ಸುಮಾರು 42 ವರ್ಷ ಕಳೆದರು. ಕೊನೆ ಕೊನೆಗೆ ಮೂಳೆಗಳು ಹಾಗೂ ಹಲ್ಲುಗಳು ಪುಡಿಯಾಗಲಾರಂಭಿಸಿದವು.

* ಅರುಣಾ ‘ಬದುಕಿದ್ದಷ್ಟು’ ಕಾಲವೂ ಆಸ್ಪತ್ರೆಯ ವಾರ್ಡ್‌ ನಂ.4 ಅವರ ಪ್ರಪಂಚವಾಗಿತ್ತು. ಅತ್ಯಾಚಾರ ನಡೆದು ಕೆಲ ವರ್ಷಗಳ ಬಳಿಕ ಸಂಬಂಕರಾರೂ ಅತ್ತ ಸುಳಿಯಲಿಲ್ಲ, ಕೊನೆಯ ದಿನದವರೆಗೂ ಆಸ್ಪತ್ರೆಯ ನರ್ಸ್‌ಗಳು ಮತ್ತು ವೈದ್ಯರಿಂದಲೇ ಅರುಣಾ ಆರೈಕೆ ಮಾಡಿದರು.

ಈ ತೀರ್ಪು ದುರದೃಷ್ಟಕರ ಮತ್ತು ಖಂಡನೀಯ. ಈ ತೀರ್ಪನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶವಿದ್ದು, ಇದು ದುರಂತಕಾರಿ ಪರಿಣಾಮಗಳಿಗೆ ದಾರಿ ಮಾಡಬಹುದು.

-ಸೂಸಾ ಪೈಕಮ್‌, ಅಧ್ಯಕ್ಷ, ಕೇರಳ ಕ್ಯಾಥೊಲಿಕ್‌ ಬಿಶಪ್‌ ಕಾನ್ಫರೆನ್ಸ್‌

ಪರೋಕ್ಷ ದಯಾಮರಣಕ್ಕೆ ಅವಕಾಶ ನೀಡಿದ್ದ 2011ರ ಐತಿಹಾಸಿಕ ತೀರ್ಪನ್ನು ಮತ್ತೆ ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ನಾನು ಆಭಾರಿಯಾಗಿದ್ದೇನೆ.

-ಪಿಂಕಿ ವಿರಾನಿ, ಮಾನವ ಹಕ್ಕು ಹೋರಾಟಗಾರ್ತಿ

ಬಹಳ ಕಾಲದಿಂದ ಇಂಥದ್ದೊಂದು ತೀರ್ಪು ಬಾಕಿಯಿತ್ತು. ಇದರಿಂದ ಪ್ರತಿಯೊಬ್ಬರೂ ‘ಘನತೆಯಿಂದ ಸಾಯುವ ಹಕ್ಕು’ ಪಡೆಯಲು ಹಾದಿ ಸುಗಮವಾಗಲಿದೆ.

-ಭಾರತೀಯ ವೈದ್ಯಕೀಯ ಸಂಘ (ಐಎಂಎ)

**************************************

ಸಂಸತ್ತಿನಲ್ಲೂ ಚರ್ಚೆ

ದಯಾಮರಣಕ್ಕೆ ಅವಕಾಶ ಕಲ್ಪಿಸುವ ‘ಮರಣಶಯ್ಯೆಯಲ್ಲಿರುವ ರೋಗಿಗಳ ಚಿಕಿತ್ಸಾ ವಿಧೇಯಕ-2016’ ಇನ್ನೂ ಸಂಸತ್ತಿನಲ್ಲಿ ಅನುಮೋದನೆಗಾಗಿ ಕಾಯುತ್ತಿದೆ. 2017ರ ಡಿ. 15ರಂದು ಲೋಕಸಭೆಯಲ್ಲಿ ಈ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಅವರು, ”ರೋಗಿಗಳು ಮರಣಶಯ್ಯೆ ಸ್ಥಿತಿಗೆ ತಲುಪಿದಾಗ ವೈದ್ಯಕೀಯ ಚಿಕಿತ್ಸೆ ನಿಲ್ಲಿಸಲು ‘ಲಿವಿಂಗ್‌ ವಿಲ್‌’ ನೀಡುವುದಕ್ಕೆ ಸರಕಾರದ ವಿರೋಧವಿಲ್ಲ,” ಎಂದಿದ್ದರು.

Comments are closed.