ರಾಷ್ಟ್ರೀಯ

ಯುವಜನರ ನಿರ್ಲಕ್ಷ್ಯದಿಂದ ತ್ರಿಪುರಾ ಚುನಾವಣೆ ಸೋಲು: ಸಿಪಿಎಂ ಆತ್ಮಾವಲೋಕನ

Pinterest LinkedIn Tumblr


ಹೊಸದಿಲ್ಲಿ: ತ್ರಿಪುರಾದಲ್ಲಿ ಚುನಾವಣೆ ಸೋಲಿಗೆ ಸಿಪಿಎಂ ವಿಶ್ಲೇಷಣೆ ಮಾಡಿದೆ.

ಯುವ ಜನರನ್ನು ತ್ರಿಪುರಾದಲ್ಲಿ ನಿರ್ಲಕ್ಷ್ಯ ಮಾಡಿದ್ದೇ ಚುನಾವಣೆಯಲ್ಲಿ ಸೋಲಿಗೆ ಕಾರಣ ಎಂದು ಸಿಪಿಎಂ ಆತ್ಮಾವಲೋಕನ ಮಾಡಿದೆ.

ರಾಜ್ಯದಲ್ಲಿ ಯುವಜನರಿಗೆ ಹೆಚ್ಚು ಉದ್ಯೋಗ ಅವಕಾಶ ಕಲ್ಪಿಸದೇ ಇದ್ದುದರಿಂದ ಚುನಾವಣೆಯಲ್ಲಿ ಭಾರಿ ಹೊಡೆತ ಬಿದ್ದಿದೆ. ಸರಕಾರಿ ಉದ್ಯೋಗ ಪ್ರತಿಯೊಬ್ಬನ ಕನಸು. ಆದರೆ ಇದು ಸೀಮಿತ ಅವಕಾಶವನ್ನು ಮಾತ್ರ ಹೊಂದಿದೆ ಎಂಬುದು ಕೂಡ ವಾಸ್ತವ ಎಂದು ಸಿಪಿಎಂ ಮುಖವಾಣಿಯಲ್ಲಿ ವಿಶ್ಲೇಷಿಸಲಾಗಿದೆ.

ಈ ಕುರಿತು ಸಿಪಿಎಂ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕಾರಟ್‌ ಸಂಪಾದಕೀಯದಲ್ಲಿ ಚುನಾವಣೆ ಸೋಲನ್ನು ವಿಶ್ಲೇಷಣೆ ಮಾಡಿದ್ದಾರೆ.

ಯುವ ಸಮುದಾಯವನ್ನು ಎಡರಂಗ ಕಡೆಗಣಿಸಿದ್ದರಿಂದ ಅವರು ನಮ್ಮನ್ನು ಕಡೆಗಣಿಸಿದ್ದಾರೆ. ಇದರಿಂದ ಎಡರಂಗ ಕೇವಲ 16 ಸ್ಥಾನ ಗೆಲ್ಲುವಂತಾಯಿತು. ನಗರ ಪ್ರದೇಶದಲ್ಲಿ ಸಿಪಿಎಂಗೆ ಸ್ವಲ್ಪ ಮತ ಬಂದರೂ ಗ್ರಾಮೀಣ ಭಾಗದಲ್ಲಿ ಜನ ಸಂಪೂರ್ಣ ನಮ್ಮನ್ನು ನಿರ್ಲಕ್ಷಿಸಿದೆ ಎಂದು ಸಂಪಾದಕೀಯದಲ್ಲಿ ವಿವರಿಸಲಾಗಿದೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಮತ್ತು ಎನ್‌ಡಿಯೇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮುನ್ಸೂಚನೆಯನ್ನು ಎಡರಂಗದ ನಾಯಕರು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಬಿಜೆಪಿ ಜತೆ ಎಡರಂಗ ನೇರವಾಗಿ ಪೈಪೋಟಿಗೆ ಬಿದ್ದಿತ್ತು. ಎಡಪಕ್ಷಗಳ ಜತೆಗಿನ ಮತ ಸಮರದಲ್ಲಿ ಬಿಜೆಪಿ ಗೆದ್ದಿದೆ. ಈಶಾನ್ಯ ರಾಜ್ಯದಲ್ಲಿ ಕಮಲ ಅರಳಿದೆ.

Comments are closed.