ರಾಷ್ಟ್ರೀಯ

ಚೀನಾ ಓಲೈಕೆಗಾಗಿ ದಲಾಯಿ ಲಾಮಾ ಕುರಿತ ನಿಲುವು ಬದಲಾವಣೆ ಇಲ್ಲ: ಭಾರತ

Pinterest LinkedIn Tumblr


ಹೊಸದಿಲ್ಲಿ: ಚೀನಾವನ್ನು ಮೆಚ್ಚಿಸುವುದಕ್ಕಾಗಿ ಬೌದ್ಧ ಗುರು ದಲಾಯಿ ಲಾಮಾ ಅವರ ಕುರಿತ ನಿಲುವನ್ನು ಭಾರತ ಬದಲಿಸುವುದಿಲ್ಲ. ಭಾರತದಲ್ಲಿ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅವರು ಸ್ವತಂತ್ರರು ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

ದಲಾಯಿ ಲಾಮಾ ಅವರು ಭಾರತದಲ್ಲಿ ನೆಲೆಸಿ 60 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಿಂದ ದೂರವಿರುವಂತೆ ಸರಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಸರಕಾರ ಈ ಸ್ಪಷ್ಟನೆ ನೀಡಿದೆ.

ದಲಾಯಿ ಲಾಮಾ ಅವರನ್ನು ಚೀನಾ ‘ಅಪಾಯಕಾರಿ ಪ್ರತ್ಯೇಕತಾವಾದಿ’ ಎಂದು ಪರಿಗಣಿಸಿದ್ದು, ಟಿಬೆಟನ್ನು ತನ್ನ ಭಾಗವೆಂದು ಘೋಷಿಸಿಕೊಂಡಿದೆ.

ಲಾಮಾ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ಆದೇಶ ನೀಡಿದ ಬಗ್ಗೆ ಸರಕಾರ ನಿರ್ದಿಷ್ಟವಾಗಿ ನಿರಾಕರಿಸಿಲ್ಲ. ಆದರೆ ದಲಾಯಿ ಲಾಮಾ ಕುರಿತ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದಷ್ಟೇ ಹೇಳಿದೆ.

‘ಬೌದ್ಧರ ಪೂಜ್ಯ ಧರ್ಮಗುರು ದಲಾಯಿ ಲಾಮಾ ಅವರ ಬಗ್ಗೆ ಭಾರತದ ನಿಲುವಿನಲ್ಲಿ ಬದಲಾವಣೆಯಿಲ್ಲ. ಅವರು ಧಾರ್ಮಿಕ ನಾಯಕರಾಗಿದ್ದು, ಭಾರತದಲ್ಲಿ ಅತ್ಯಂತ ಗೌರವಾನ್ವಿತರಾಗಿದ್ದಾರೆ. ಭಾರತದಲ್ಲಿ ತಮ್ಮ ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅವರು ಸಂಪೂರ್ಣ ಸ್ವತಂತ್ರರು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ದಲಾಯಿ ಲಾಮಾ ಅವರು ಭಾರತಕ್ಕೆ ಆಗಮಿಸಿ 60 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 1959ರ ಮಾರ್ಚ್‌ನಲ್ಲಿ ಚೀನಾ ಸರಕಾರ ಟಿಬೆಟ್‌ನ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಿದಾಗ ಲ್ಹಾಸಾದಿಂದ ಪಲಾಯನ ಮಾಡಿ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರು.

‘ಸೈನಿಕನಂತೆ ವೇಷ ಮರೆಸಿಕೊಂಡ ದಲಾಯಿ ಲಾಮಾ ಅವರು ತಮ್ಮ ಅರಮನೆಯಿಂದ ತಪ್ಪಿಸಿಕೊಂಡು ಜನಜಂಗುಳಿಯಲ್ಲಿ ಸೇರಿ ಪಲಾಯನ ಮಾಡಿದ್ದರು. ನಂತರ ಅವರನ್ನು ಯಾವತ್ತೂ ನೋಡಿಲ್ಲ’ ಎಂದು 2015ರಲ್ಲಿ ಟೈಮ್ಸ್‌ ಮ್ಯಾಗಜಿನ್‌ ಬರೆದಿತ್ತು. ಆ ಅರಮನೆಯನ್ನು ಈಗಲೂ ಲ್ಹಾಸಾದಲ್ಲಿ ದಲಾಯಿ ಲಾಮಾ ಅರಮನೆ ಎಂದೇ ಕರೆಯಲಾಗುತ್ತಿದೆ.

ಟಿಬೆಟ್‌ನಿಂದ ಪರಾರಿಯಾದ ಎರಡು ವಾರಗಳ ಬಳಿಕ ಭಾರತದಲ್ಲಿ ಕಾಣಿಸಿಕೊಂಡರು. ನಂತರ ಧರ್ಮಶಾಲಾದಲ್ಲಿ ವಾಸ್ತವ್ಯ ಹೂಡಿ ಅದನ್ನೇ ತಮ್ಮ ಅಧಿಕೃತ ರಾಜಧಾನಿಯಾಗಿ ಮಾಡಿಕೊಂಡರು.

Comments are closed.