
ಮೆಂಡಿಪಾಥರ್ (ಮೇಘಾಲಯ): ಬಹುಸಂಖ್ಯೆ ಕ್ರಿಶ್ಚಿಯನ್ನರು ಇರುವ ಮೇಘಾಲಯದ ಚರ್ಚ್ ವೊಂದಕ್ಕೆ ಬಿಜೆಪಿ ಹಣ ನೀಡಲು ಯತ್ನ ನಡೆಸಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ಆರೋಪಿಸಿದ್ದಾರೆ.
ಮೇಘಾಲಯದಲ್ಲಿ ನಡೆಸಲಾದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಆರ್’ಎಸ್ಎಸ್ ಜೊತೆಗೆ ಬಿಜೆಪಿ ಸಚಿವರೊಬ್ಬರು ಮೇಘಾಲಯದ ಚರ್ಚ್ ವೊಂದಕ್ಕೆ ಕೋಟಿಗಟ್ಟಲೆ ಹಣ ನೀಡಲು ಯತ್ನಿ ನಡೆಸಿದ್ದರು ಎಂದು ಹೇಳಿದ್ದಾರೆ.
ಬಿಜೆಪಿ ಬಳಿ ಸಾಕಷ್ಟು ಹಣವಿದೆ ಎಂಬುದು ನನಗೆ ಗೊತ್ತಿದೆ. ಭಾರತದಲ್ಲಿರುವ ಸಾಕಷ್ಟು ಶ್ರೀಮಂತ ವ್ಯಕ್ತಿಗಳು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಹಣದಿಂದಲೇ ಬಿಜೆಪಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಸೇರಿದಂತೆ ಹಲವು ಸಂಸದರನ್ನು ಖರೀದಿ ಮಾಡಿದೆ ಎಂಬುದು ನನಗೆ ಗೊತ್ತಿದೆ. ಆರ್ಥಿಕ ಬಂಡವಾಳದಿಂದಾಗಿ ನಮ್ಮ ಪಕ್ಷದವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದೇ ಅಹಂಕಾರದಲ್ಲಿಯೇ ಬಿಜೆಪಿಯವರು ದೇವರನ್ನು ಖರೀದಿ ಮಾಡಬಹುದು ಎಂದು ತಿಳಿದಿದ್ದಾರೆ. ಆದರೆ, ಮೇಘಾಲಯದ ಜನರ ಶಕ್ತಿ, ಸ್ಪೂರ್ತಿಯನ್ನು ಎಂದಿಗೂ ಖರೀದಿ ಮಾಡಲು ಅವರಿಗೆ ಸಾಘ್ಯವಿಲ್ಲ. ಇದಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಮುಂದಿನ ಬಾರಿ ವಿದೇಶ ಪ್ರವಾಸ ಕೈಗೊಂಡಾಗ ವಜ್ರ ವ್ಯಾಪಾರಿ ನೀರವ್ ಮೋದಿಯವರನ್ನು ಭಾರತಕ್ಕೆ ಮರಳಿ ಕರೆತನ್ನಿ ಎಂದಿದ್ದಾರೆ.
ರೂ.22,000 ಕೋಟಿ ಭಾರತೀಯರ ಹಣವನ್ನು ಹೊತ್ತುಕೊಂಡು ಓಡಿಹೋಗಿರುವ ನೀರವ್ ಮೋದಿ ಬಗ್ಗೆ ಇಂದು ಜನರು ಚಿಂತಿಸುತ್ತಿದ್ದಾರೆ. ಮುಂದಿನ ಬಾರಿ ವಿದೇಶ ಪ್ರವಾಸಕ್ಕೆ ಹೋದಾಗ ಭಾರತೀಯರ ಹಣದೊಂದಿಗೆ ನೀರವ್ ಮೋದಿಯನ್ನು ಭಾರತಕ್ಕೆ ಕರೆತನ್ನಿ ಎಂದು ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದಷ್ಟೇ ಮತ್ತೊಬ್ಬರು ಮೋದಿಯವರು ಬಂದಿದ್ದರು. ಪ್ರತೀಯೊಬ್ಬ ಭಾರತೀಯನಿಗೂ ರೂ.15 ಲಕ್ಷ ನೀಡುವುದಾಗಿ ಹಾಗೂ 2 ಕೋಟಿ ಯುವಕರಿದೆ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಹೇಳಿದ್ದರು. ನೀರವ್ ಮೋದಿ ಕನಸುಗಳ ವಜ್ರಗಳನ್ನು ಮಾರಾಟ ಮಾಡಿದಂತೆ ಅಚ್ಛೇ ದಿನದ ಕನಸುಗಳನ್ನು ಮಾರಾಟ ಮಾಡಿದ್ದರು.
ಮೋದಿಯವರು ನೀಡಿದ್ದ ಭರವಸೆಗಳನ್ನು ಯುವಕರು, ರೈತರು, ಬುಡಕಟ್ಟು ಜನಾಂಗದವರು ಹಾಗೂ ಇಡೀ ದೇಶದ ಜನತೆ ನಂಬಿತ್ತು. ಅಧಿಕಾರಕ್ಕೆ ಬಂದು 4 ವರ್ಷಗಳು ಕಳೆದಿದೆ. ಇದೀಗ ಅವರ ಭರವಸೆಗಳನ್ನು ಯಾರೂ ನಂಬುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಆಧಾರ್ ಹಾಗೂ ನೋಟು ನಿಷೇಧ ಕುರಿತಂತೆಯೂ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Comments are closed.