ರಾಷ್ಟ್ರೀಯ

ಕಿಡ್ನಾಪ್ ಆಗಿದ್ದ ಬಾಲಕನನ್ನು ರಕ್ಷಣೆ; ಎನ್‍ಕೌಂಟರಿಗೆ ಓರ್ವ ಬಲಿ

Pinterest LinkedIn Tumblr

ನವದೆಹಲಿ: ಅಪಹರಣವಾಗಿದ್ದ ನಾಲ್ಕೂವರೆ ವರ್ಷದ ಬಾಲಕನನ್ನು ಸುಮಾರು 12 ದಿನಗಳ ಬಳಿಕ ಪೊಲೀಸರು ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಬಾಲಕ ವಿಹಾನ್ ಶಾಲಾ ಬಸ್ ನಲ್ಲಿ ದಿಲ್ಶಾನ್ ಗಾರ್ಡನ್ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ಆತನನ್ನು ಅಪಹರಿಸಿದ್ದರು. ಕೂಡಲೇ ಪೋಷಕರು ಮಗ ನಾಪತ್ತೆಯಾಗಿರುವ ಕುರಿತು ಕ್ರೈಂ ಬ್ರಾಂಚ್ ಪೊಲೀಸರಿಗೆ ದೂರು ನೀಡಿದ್ದರು.

ವಿಹಾನ್ ನಗರದ ವಿವೇಕಾನಂದ ಶಾಲೆಯಲ್ಲಿ ಓದುತ್ತಿದ್ದು, ಜನವರಿ 25ರಿಂದ ನಾಪತ್ತೆಯಾಗಿದ್ದ. ನಾಪತ್ತೆಯಾದ 3 ದಿನಗಳ ಬಳಿಕ ಅಪರಿಚಿತರು ವಿಹಾನ್ ಪೋಷಕರಿಗೆ ಕರೆ ಮಾಡಿ, 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕರೆ ಬಂದ ಕೂಡಲೇ ಎಚ್ಚೆತ್ತ ಪೊಲೀಸರು ಅಪಹರಣಕಾರರ ಫೋನ್ ಮಾಹಿತಿ ಕಲೆ ಹಾಕಿದಾಗ ಅವರು ಘಜಿಯಾಬಾದ್ ನಲ್ಲಿ ಅಡಗಿಕೊಂಡಿರುವುದು ಗೊತ್ತಾಗಿತ್ತು.

ಕೂಡಲೇ ಪೊಲೀಸರು ಘಜಿಯಾಬಾದ್ ಪೊಲೀಸ್ ತಂಡದ ನೆರವು ಪಡೆದು ಇಲ್ಲಿನ ಶಾಲಿಮಾರ್ ಸಿಟಿ ಅರ್ಪಾಟ್‍ಮೆಂಟ್ ನಲ್ಲಿ ಅಪಹರಣಕಾರರ ಮೇಲೆ ಗುಂಡಿನ ದಾಳಿ ನಡೆಸಿ ಬಾಲಕನನ್ನು ರಕ್ಷಿಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಓರ್ವ ಆರೋಪಿ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ. ಈ ಮಧ್ಯೆ ಮೂರನೇ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಪೊಲೀಸರು ಅಪಹರಣಕಾರರನ್ನು ಬೆನ್ನಟ್ಟುವ ಮೊದಲು ಈ ಕುರಿತು ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು. ಹೀಗಾಗಿ ಬಾಲಕನನ್ನು ರಕ್ಷಿಸಿ ಸುರಕ್ಷಿತವಾಗಿ ಹೆತ್ತವರಿಗೆ ಒಪ್ಪಿಸಿದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.

Comments are closed.