ರಾಷ್ಟ್ರೀಯ

ರಾಮಮಂದಿರ ನಿರ್ಮಾಣ ಶೀಘ್ರ ಆಗಲಿ ಯುಪಿ ಡಿಜಿ ಹೋಂ ಗಾರ್ಡ್‌ ಆಗ್ರಹ

Pinterest LinkedIn Tumblr


ಲಖನೌ: ಕಾಸ್‌ಗಂಜ್‌ ಪಟ್ಟಣದಲ್ಲಿ ನಡೆದ ಕೋಮುಗಲಭೆಗೆ ಬಲಪಂಥೀಯ ಪಂಗಡಗಳೇ ಕಾರಣ ಎಂದು ಐಎಎಸ್‌ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಆರೋಪಿಸಿದ ಬೆನ್ನಲ್ಲೇ, ಇಲ್ಲಿನ ಡಿಪಿಪಿ ಶ್ರೇಣಿಯ ಐಪಿಎಸ್‌ ಅಧಿಕಾರಿಯೊಬ್ಬರು ಅಯೋಧ್ಯೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸ್‌ ಮಹಾ ನಿರ್ದೇಶಕರ ರಾರ‍ಯಂಕ್‌ನ ಅಧಿಕಾರಿಯಾಗಿರುವ ಹೋಮ್‌ ಗಾರ್ಡ್‌ ಡಿಜಿ ಸೂರ್ಯ ಕುಮಾರ್‌ ಶುಕ್ಲಾ ಅವರು ಎರಡು ದಿನಗಳ ಹಿಂದೆ ಲಖನೌ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ರಾಮಮಂದಿರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಷ್ಟೇ ಅಲ್ಲದೆ, ಎಷ್ಟು ಸಾಧ್ಯವೋ ಅಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡುವಂತೆ ಆಗ್ರಹ ಕೂಡ ಮಾಡಿದ್ದಾರೆ. ಇವೆಲ್ಲವೂ ಕ್ಯಾಮರಾದಲ್ಲಿ ದಾಖಲಾಗಿವೆ. ಅಂದಹಾಗೆ ಸೂರ್ಯ ಕುಮಾರ್‌ ಅವರು ಇದೇ ಆಗಸ್ಟ್‌ ತಿಂಗಳಲ್ಲಿ ನಿವೃತ್ತಿಯಾಗುವವರಿದ್ದಾರೆ.

ಕೆಲವೇ ದಿನಗಳ ಹಿಂದೆ ಬರೇಲಿ ಜಿಲ್ಲಾ ಮ್ಯಾಜಿಸ್ಪ್ರೇಟ್‌ ರಾಘವೇಂದ್ರ ವಿಕ್ರಂ ಸಿಂಗ್‌ ಅವರು ‘ಉತ್ತರ ಪ್ರದೇಶದ ಪಶ್ಚಿಮ ಭಾಗದ ಪಟ್ಟಣ ಕಾಸ್‌ಗಂಜ್‌ನಲ್ಲಿ ನಡೆದ ಕೋಮುಗಲಭೆಗೆ ಬಲಪಂಥೀಯ ಸಂಘಟನೆಗಳೇ ಕಾರಣ’ ಎಂದು ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದರು.

ಹೇಳಿಕೆ ಪೋಸ್ಟ್‌ ಮಾಡಿದ ಕೆಲವೇ ಹೊತ್ತಿನಲ್ಲಿ ಐಎಎಸ್‌ ಅಧಿಕಾರಿ ಅದನ್ನು ಅಳಿಸಿಹಾಕಿದ್ದರು.

ನಿನ್ನೆ, 1982ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಶುಕ್ಲಾ ಅವರ ವಿಡಿಯೊ ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ.

”ಈ ಕಾರ್ಯಕ್ರಮದ ಅಂಗವಾಗಿ, ಎಷ್ಟು ಸಾಧ್ಯವೋ ಅಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ನಾವು ರಾಮಭಕ್ತರು, ಈ ಮೂಲಕ ಆಗ್ರಹಪಡಿಸುತ್ತಿದ್ದೇವೆ,” ಎಂದು ಶುಕ್ಲಾ ಹೇಳುತ್ತಿರುವ ದೃಶ್ಯ ತುಣುಕುಗಳು ಆ ವಿಡಿಯೊದಲ್ಲಿವೆ.

ಅವರ ಜತೆ ಹಲವಾರು ಮಂದಿ ಇದ್ದರು. ಅವರೆಲ್ಲರೂ ‘ಜೈ ಶ್ರೀ ರಾಮ್‌’ ಘೋಷಣೆ ಕೂಗುತ್ತಿರುವ ದೃಶ್ಯವೂ ಬಿತ್ತರಗೊಂಡಿದೆ.

ನಾನು ಹಾಗೆ ಹೇಳಿದ್ದಲ್ಲ!

ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣ ಹಾಗೂ ಎಲೆಎಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆಯೇ ಐಪಿಎಸ್‌ ಅಧಿಕಾರಿ ಶುಕ್ಲಾ ಉಲ್ಟಾ ಹೊಡೆದಿದ್ದಾರೆ. ”ಶಾಂತಿ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ನಾನು ಆಗ್ರಹಿಸುತ್ತಿದ್ದೆ. ವೈರಲ್‌ ಆಗಿರುವ ವಿಡಿಯೊದಲ್ಲಿ ಒಂದಷ್ಟನ್ನು ತಿದ್ದಲಾಗಿದೆ. ಅಲ್ಲದೆ, ಗೊಂದಲ ಸೃಷ್ಟಿಸುವುದಕ್ಕಾಗಿ ಇನ್ನೊಂದಷ್ಟು ಹೇಳಿಕೆಗಳನ್ನು ಅಳಿಸಿಹಾಕಲಾಗಿದೆ,” ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಮಂದಿರ ಹಾಗೂ ಅಲ್ಲಿಂದ ಒಂದು ನಿರ್ದಿಷ್ಟ ದೂರದಲ್ಲಿ ಮಸೀದಿ ನಿರ್ಮಾಣ ಮಾಡುವ ವಿಷಯದಲ್ಲಿ ಹಿಂದುಗಳು ಹಾಗೂ ಮುಸ್ಲಿಮರು ಪರಸ್ಪರ ಮಾತುಕತೆ ನಡೆಸಿದಲ್ಲಿ ವಿವಾದ ಶಾಂತಿಯುತವಾಗಿ ಬಗೆಹರಿಯಲಿದೆ ಎಂದು ಕಾರ್ಯಕ್ರಮದಲ್ಲಿ ಚರ್ಚೆ ನಡೆಯಿತು ಎಂದು ಶುಕ್ಲಾ ತಿಳಿಸಿದ್ದಾರೆ.

Comments are closed.