ರಾಷ್ಟ್ರೀಯ

ಡೇರಾ ಹಿಂಸಾಚಾರ ವೇಳೆ 126 ಕೋಟಿ ರೂಪಾಯಿ ನಷ್ಟ

Pinterest LinkedIn Tumblr


ಚಂಡೀಗಢ: ಕಳೆದ ಆಗಸ್ಟ್‌ನಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್‌ಮೀತ್‌ ರಾಮ್‌ ರಹೀಮ್‌ಗೆ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 126 ಕೋಟಿ ರೂಪಾಯಿ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.

ಕಳೆದ ಆಗಸ್ಟ್‌ 25ರಂದು ಪಂಚುಕಲಾದಲ್ಲಿರುವ ನ್ಯಾಯಾಲಯದಲ್ಲಿ ರಾಮ್‌ ರಹೀಮ್‌ಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಶಿಕ್ಷೆಗೆ ಗುರಿಪಡಿಸಲಾಯಿತು.

ಇದರ ಬೆನ್ನಲ್ಲೇ ನಾಲ್ಕೈದು ಜಿಲ್ಲೆಗಳಲ್ಲಿ ಡೇರಾ ಸಚ್ಚಾ ಅನುಯಾಯಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಹಲವಾರು ಮಂದಿ ಮೃತಪಟ್ಟಿದ್ದರು, ಅಲ್ಲದೇ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು.

ಐದು ತಿಂಗಳ ಬಳಿಕ ನಷ್ಟದ ವರದಿಯನ್ನು ಪರಿಷ್ಕರಿಸಿ ಸಲ್ಲಿಸಲಾಗಿದ್ದು, ಒಟ್ಟು 126 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಅಂಬಾಲಾದಲ್ಲಿ ಅತಿ ಹೆಚ್ಚು 47 ಕೋಟಿ ರೂಪಾಯಿ ನಷ್ಟವಾಗಿದೆ. ನಂತರದ ಸ್ಥಾನ ಫತೇಹ್‌ಬಾದ್‌ ಜಿಲ್ಲೆಯದ್ದು. ಇಲ್ಲಿ ಸುಮಾರು 15 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.

ಪಂಚಕುಲಾದಲ್ಲಿ ಅತಿಹೆಚ್ಚು ಹಿಂಸಾಚಾರ ಸಂಭವಿಸಿದ್ದು, 36 ಮಂದಿ ಮೃತಪಟ್ಟಿದ್ದು, ಇಲ್ಲಿ 11 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಿಸ್ಸಾರ್‌, ಝಾಜರ್‌, ರೇವಾರಿ, ನಾರ್ನುಲ್‌, ಪಲ್ವಾಲ್‌, ಜಿಂದ್‌, ನುವಾ ಹಾಗೂ ಯಮುನಾನಗರದಲ್ಲಿಯೂ ಡೇರಾ ಸಚ್ಚಾ ಅನುಯಾಯಿಗಳು ನಡೆಸಿದ ಹಿಂಸಾಚಾರದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Comments are closed.