ರಾಷ್ಟ್ರೀಯ

ಹಿಂದೂಯೇತರರು ಸೋಮನಾಥ ದೇವಾಲಯ ಪ್ರವೇಶಿಸಲು ಹೆಸರು ನಮೂದಿಸಬೇಕು ಏಕೆ?

Pinterest LinkedIn Tumblr


ಅಹಮದಾಬಾದ್: ಸೋಮನಾಥ ದೇವಾಲಯದ ಪಾವಿತ್ರ್ಯತೆ ಹಾಗೂ ರಕ್ಷಣೆ ಸಲುವಾಗಿ ಅಲ್ಲಿಗೆ ಭೇಟಿ ನೀಡುವ ಹಿಂದೂಗಳಲ್ಲದ ವ್ಯಕ್ತಿಗಳು ದಾಖಲಾತಿ ಪುಸ್ತಕಗಳಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

ಸೋಮನಾಥ ದೇವಾಲಯಕ್ಕೆ ಪ್ರವೇಶಿಸುವ ಹಿಂದೂ ಧರ್ಮವಲ್ಲದ ಬೇರೆ ಧರ್ಮಗಳ ವ್ಯಕ್ತಿಗಳ ವಿವರಗಳನ್ನು ದಾಖಲಿಸಿಕೊಳ್ಳುವುದು ಪದ್ಧತಿ. ಬೇರೆ ಧರ್ಮಗಳ ಜನರು ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ದಾಖಲಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ತಮ್ಮ ವಿವರಗಳನ್ನು ನೀಡಬೇಕು. ಈ ನಿಯಮವನ್ನು ನಾವು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದು ದೇವಸ್ಥಾನದ ಮೇಲ್ವಿಚಾರಕ ಸಂಜಯ್ ಭಾಯ್ ಜೋಶಿ ಹೇಳುತ್ತಾರೆ. 2015ರಿಂದ ಈ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದ್ದು, ಹಿಂದೂಯೇತರ ವ್ಯಕ್ತಿಗಳು ದೇವಸ್ಥಾನವನ್ನು ಪೂರ್ವಾನುಮತಿಯಿಲ್ಲದೆ ಪ್ರವೇಶಿಸುವಂತಿಲ್ಲ.

ಬೇರೆ ಧರ್ಮದವರನ್ನು ಸೋಮನಾಥ ದೇವಸ್ಥಾನಕ್ಕೆ ಪ್ರವೇಶಿಸಲು ಅನುಮತಿ ನೀಡಬೇಕೆಂದು ಪ್ರಾತಿನಿಧ್ಯಗಳು ಬಂದ ನಂತರ ಹಿಂದೂಯೇತರರು ಪ್ರವೇಶಿಸಬಾರದೆಂಬ ನಿಯಮವನ್ನು ತೆಗೆದುಹಾಕಲಾಯಿತು ಎಂದು ದೇವಸ್ಥಾನದ ಟ್ರಸ್ಟಿನ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೇರೆ ಧರ್ಮದವರ ವಿವರ ಪಡೆಯದೆ ಗುರುತು ಪಡೆಯದೆ ದೇವಸ್ಥಾನದೊಳಗೆ ಹೋಗಲು ಬಿಟ್ಟರೆ ಭದ್ರತೆ ನಮಗೆ ಆತಂಕವುಂಟಾಗುತ್ತದೆ.ಅಲ್ಲದೆ ದೇವಸ್ಥಾನದ ಜ್ಯೋತಿರ್ಲಿಂಗ ಹಿಂದೂಗಳಿಗೆ ಬಹಳ ಪವಿತ್ರವಾಗಿರುವುದರಿಂದ ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ದೇವಸ್ಥಾನದ ಅಧಿಕಾರಿಗಳು.

ಬೇರೆ ಧರ್ಮಗಳ ಭಕ್ತರು ದೇವಸ್ಥಾನದೊಳಗೆ ಪ್ರವೇಶಿಸುವ ಮುನ್ನ ದೇವಸ್ಥಾನದ ಪ್ರಧಾನ ವ್ಯವಸ್ಥಾಪಕರ ಅನುಮತಿ ತೆಗೆದುಕೊಳ್ಳಬೇಕೆಂದು ನೊಟೀಸೊಂದನ್ನು ಮುಖ್ಯ ದ್ವಾರದಲ್ಲಿ ಹಾಕಲಾಗಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ಹಿಂದೂಯೇತರ ಧರ್ಮಕ್ಕೆ ಸೇರಿದವರೆಂದು ದಾಖಲಾತಿ ಪುಸ್ತಕದಲ್ಲಿ ಬರೆದು ಒಳಹೋಗಿದ್ದರು.

Comments are closed.