ರಾಷ್ಟ್ರೀಯ

ಒಂದೇ ಶಾಲೆಯ 4 ವಿದ್ಯಾರ್ಥಿನಿಯರು ಬಾವಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ

Pinterest LinkedIn Tumblr

ಚೆನ್ನೈ: ಶಿಕ್ಷಕರು ಬೈದರೆಂಬ ಕಾರಣಕ್ಕಾಗಿ ತಮಿಳುನಾಡಿನ ವೆಲ್ಲೂರಿನ ಸರ್ಕಾರಿ ಶಾಲೆಯೊಂದರ ನಾಲ್ವರು ಶಾಲಾ ವಿದ್ಯಾರ್ಥಿನಿಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ವೆಲ್ಲೂರು ಬಳಿ ನಡೆದಿದೆ.

ಚೆನ್ನೈನಿಂದ 88 ಕಿಮೀ ದೂರದಲ್ಲಿರುವ ಪಣಪ್ಪಾಕಂ ಗ್ರಾಮದ ಬಾವಿಯಲ್ಲಿ ಶುಕ್ರವಾರದಂದು ವಿದ್ಯಾರ್ಥಿನಿಯರು ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಮೃತರನ್ನು ದೀಪಾ, ಶಂಕರಿ, ಮೊನಿಷಾ ಹಾಗೂ ರೇವತಿ ಎಂದು ಗುರುತಿಸಲಾಗಿದೆ.

ಈ ವಿದ್ಯಾರ್ಥಿನಿಯರು ಇತ್ತೀಚಿನ ಪರೀಕ್ಷೆಯೊಂದರಲ್ಲಿ ಫೇಲ್ ಆಗಿದ್ದರಿಂದ ಶಾಲೆಯಲ್ಲಿ ಶಿಕ್ಷಕರು ಬೈದಿದ್ದು, ಪೋಷಕರನ್ನು ಕರೆತರುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಭಯಗೊಂಡು ಆತ್ಮಗಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ನಾಲ್ವರು ವಿದ್ಯಾರ್ಥಿನಿಯರು ಇಲ್ಲಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊದಲನೇ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರದಂದು ತರಗತಿಗೆ ಹಾಜರಾಗಿರಲಿಲ್ಲ. ವಿದ್ಯಾರ್ಥಿನಿಯರು ಕಾಣೆಯಾದ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಸ್ನೇಹಿತರು ಶುಕ್ರವಾರ ರಾತ್ರಿ ಎಲ್ಲಾ ಕಡೆ ಹುಡುಕಾಡಿದಾಗ ಬಾವಿಯ ಬಳಿ ಅವರ ಸೈಕಲ್‍ಗಳು ಪತ್ತೆಯಾಗಿದ್ದವು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನಾವು ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಕೆಲವು ಪೋಷಕರು ಹಾಗೂ ಸ್ಥಳೀಯರ ಪ್ರಕಾರ ಶಿಕ್ಷಕರು ಪೋಷಕರನ್ನ ಕರೆತರುವಂತೆ ಈ ವಿದ್ಯಾರ್ಥಿನಿಯರಿಗೆ ಹೇಳಿದ್ದರು ಎಂದು ತಿಳಿದುಬಂದಿದೆ ಎಂದು ಹಿರಿಯ ಅಧಿಕಾರಿ ಪಿ ಪಾಕಲವಾನ್ ಹೇಳಿದ್ದಾರೆ.

ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ 65 ಅಡಿ ಆಳದ ಬಾವಿಯಿಂದ ವಿದ್ಯಾರ್ಥಿನಿಯರ ಶವವನ್ನ ಹೊರತೆಗೆದಿದ್ದಾರೆ. ಮೃತದೇಹಗಳನ್ನ ವಲ್ಲಜಾ ಆಸ್ಪತ್ರೆಗೆ ರವಾನಿಸಲಾಗಿದೆ.

Comments are closed.