ಚೆನ್ನೈ: ಐಟಿ ದಾಳಿ ಮೂಲಕ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ನಮ್ಮ ಕುಟುಂಬವನ್ನು ನಾಶ ಮಾಡಲು ಪ್ರಯತ್ಮಿಸಿದ್ದು, ಅವರ ಪ್ರಯತ್ನ ಎಂದೂ ಸಫಲವಾಗುವುದಿಲ್ಲ ಎಂದು ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಶನಿವಾರ ಹೇಳಿದ್ದಾರೆ.
ಶುಕ್ರವಾರ ರಾತ್ರಿ ಚೆನ್ನೈನ ಪೋಯಸ್ ಗಾರ್ಡನ್ ನಿವಾಸದ ಮೇಲೆ ಐಟಿ ಆಧಿಕಾರಿಗಳು ದಾಳಿ ನಡೆಸಿದ ಹಿನ್ನಲೆಯಲ್ಲಿ ಚೆನ್ನೈನಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಿನಕರನ್, ಪೋಯಸ್ ಗಾರ್ಡನ್ ನಿವಾಸ ಅಮ್ಮಾ (ಜಯಲಲಿತಾ) ಅವರು ಬದುಕಿ ಬಾಳಿದ ನಿವಾಸ.. ನಮ್ಮೆಲ್ಲರಿಗೂ ಅದು ದೇಗುಲವಿದ್ದಂತೆ. ಆದರೆ ಸಿಎಂ ಪಳನಿ ಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಪ್ರಧಾನಿ ಮೋದಿಯೊಂದಿಗೆ ಕೈ ಜೋಡಿಸಿ ಐಟಿ ದಾಳಿ ನಡೆಸಿದ್ದಾರೆ. ಆ ಮೂಲಕ ಅಮ್ಮಾ ನಿವಾಸವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಹೇಳಿದರು.
ಕಳೆದ ವಾರ ನಡೆದ ಮತ್ತು ರಾತ್ರಿ ನಡೆದ ಐಟಿ ದಾಳಿಯ ಹಿಂದೆ ಖಂಡಿತಾ ರಾಜಕೀಯ ಷಡ್ಯಂತ್ರ ಅಡಗಿದ್ದು, ಪಳನಿ ಸ್ವಾಮಿ, ಪನ್ನೀರ್ ಸೆಲ್ವಂ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಐಟಿ ದಾಳಿಗೆ ಕುಮ್ಮಕ್ಕು ನೀಡಿದ್ದಾರೆ. ಆ ಮೂಲಕ ಅಮ್ಮ ಅವರ ಆತ್ಮಕ್ಕೆ ಮೋಸ ಮಾಡಿದ್ದಾರೆ ಎಂದು ದಿನಕರನ್ ಹೇಳಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಕಿಡಿಕಾರಿದ ದಿನಕರನ್, ಪ್ರಧಾನಿ ನರೇಂದ್ರ ಮೋದಿ ಮತ್ತು ಜೇಟ್ಲಿ ಐಟಿ ದಾಳಿ ಮೂಲಕ ನಮ್ಮ ಕುಟುಂಬವನ್ನು ಒಡೆಯಲು ಯತ್ನಿಸಿದ್ದಾರೆ. ಐಟಿ ದಾಳಿ ನಡೆಸಿ ನಮ್ಮ ಬಣದ ಜನ ಪ್ರತಿನಿಧಿಗಳ ಬೆದರಿಸುವ ತಂತ್ರ ನಡೆಸುತ್ತಿದ್ದಾರೆ. ಪಳನಿ ಸ್ವಾಮಿ ಮತ್ತು ಪನ್ನೀರ್ ಸೆಲ್ವಂ ತಮ್ಮ ಅಧಿಕಾರದ ಆಸೆಗಾಗಿ ಯಾವುದೇ ಹಂತಕ್ಕೆ ಇಳಿಯಲು ಅವರು ಸಿದ್ಧರಾಗಿದ್ದಾರೆ ಎಂದು ಆರೋಪಿಸಿದರು.
ಕಳೆದ ವಾರವಷ್ಟೇ ಶಶಿಕಲಾ ಅವರ ನಿವಾಸ ಸೇರಿದಂತೆ ದೇಶಾದ್ಯಂತ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ನಿನ್ನೆ ರಾತ್ರಿ ಜಯಾ ಅವರ ಪೋಯಸ್ ಗಾರ್ಡನ್ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
Comments are closed.