ಹೊಸದಿಲ್ಲಿ: ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಕಾವು ಮುಗಿಲು ಮುಟ್ಟಿದ್ದು, ಸೋಮವಾರ ಕಾಂಗ್ರೆಸ್ ಪರ ಪ್ರಚಾರಕ್ಕೆ ಆಗಮಿಸಿದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರಕಾರದ ವಿರುದ್ಧ ಕಿಡಿ ಕಾಡಿದ್ದಾರೆ.
ಭಗವದ್ಗೀತೆಯ ಸಾಲೊಂದನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್, ನೀವು ದುಡಿದರೆ ಫಲ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಲಾಗಿದೆ. ಆದರೆ ಮೋದಿ ವ್ಯಾಖ್ಯಾನದಲ್ಲಿ ಮಾತ್ರ ಇದನ್ನು ತಿರುಚಿ ‘ಫಲವನ್ನು ಎಲ್ಲರೂ ತಿನ್ನಿ. ಆದರೆ ಕೆಲಸ ಮಾತ್ರ ಯಾರೂ ಮಾಡಬೇಡಿ’ ಎಂಬಂತಿದೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಮೇಕ್ ಇನ್ ಇಂಡಿಯಾ ಹೆಸರಿಗಷ್ಟೇ ಸೀಮಿತವಾಗಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋದಿ ಮತ್ತು ರಾಹುಲ್ ಚುನಾವಣಾ ಪ್ರಚಾರದಲ್ಲಿ ಒಬ್ಬರನ್ನೊಬ್ಬರು ಸದಾ ಕಾಲೆಳೆಯುತ್ತಲೇ ಬಂದಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಂಕ್ಸ್ ಎಂದು ಕರೆದಿದ್ದರು, ಜಿಎಸ್ಟಿ ಮತ್ತು ನೋಟು ನಿಷೇಧ ದೇಶದ ಆರ್ಥಿಕ ಪ್ರಗತಿಗೆ ಮಾರಕವಾಗಿದೆ ಎಂದು ರಾಹುಲ್ ಆರೋಪಿಸಿದ್ದರು.
ಭಾನುವಾರದಂದು ಪ್ರಚಾರ ರ್ಯಾಲಿಯಲ್ಲಿ ಮೋದಿ, ‘ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಹೆದರಿ ಕಾಲ್ಕಿತ್ತಿದೆ, ಹೀಗಾಗಿ ಇದು ಏಕ ಮುಖ ಚುನವಾಣೆ ಎಂದು’ ಬಣ್ಣಿಸಿದ್ದರು. ಇದಕ್ಕೆ ತಿರುಗೇಟಾಗಿ ರಾಹುಲ್, ದೇಶದಲ್ಲಿನ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲಾಗದಿದ್ದರೆ ಸೀಟಿನಿಂದ ಕೆಳಗಿಳಿಯಿರಿ ಎಂದು ಟ್ವೀಟ್ ಮಾಡಿದ್ದರು.
Comments are closed.