ರಾಷ್ಟ್ರೀಯ

ಕಾನ್ಪುರ ರೈಲು ದುರಂತದ ಮಾಸ್ಟರ್ ಮೈಂಡ್ ಇಸಿಸ್ ಏಜೆಂಟ್ ಶಂಶುಲ್ ಹುದಾ ಬಂಧನ

Pinterest LinkedIn Tumblr

ನವದೆಹಲಿ: ಉತ್ತರ ಪ್ರದಶದ ಕಾನ್ಪುರದಲ್ಲಿ 150 ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಇಂದೋರ್-ಪಾಟ್ನಾ ರೈಲು ದುರಂತದ ಮಾಸ್ಟರ್ ಮೈಂಡ್ ಇಸಿಸ್ ಏಜೆಂಟ್ ಶಂಶುಲ್ ಹುದಾನನ್ನು ಭಾರತೀಯ ಭದ್ರತಾ ಸಂಸ್ಥೆ ಮಂಗಳವಾರ ಬಂಧನಕ್ಕೊಳಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ದುಬೈ ಮೂಲದ ನೇಪಾಳಿ ವ್ಯಾಪಾರಿಯಾಗಿರುವ ಶಂಶುಲ್ ಹುದಾನ್ನು ದುಬೈಯಿಂದ ಗಡಿಪಾರು ಮಾಡಲಾಗಿತ್ತು. ಕಾನ್ಪುರ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಭದ್ರತಾ ಸಂಸ್ಥೆ ಶಂಶುಲ್ ಹುದಾ ವಿರುದ್ಧ ದಾಖಲೆಗಳನ್ನು ಕಲೆಹಾಕಿತ್ತು. ಖಚಿತ ಮಾಹಿತಿ ಮೇರೆ ನಿನ್ನೆ ನೇಪಾಳ ಪೊಲೀಸ್ ವಿಶೇಷ ತಂಡದ ಅಧಿಕಾರಿಗಳು ತ್ರಿಭುವನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುದಾ ಸೇರಿದಂತೆ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಹುದಾನನ್ನು ನಿನ್ನೆ ತ್ರಿಭುವನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಪಡಿಸಲಾಯಿತು ಎಂದು ಡಿಐಜಿ ಪಶುಪತಿ ಉಪಾಧ್ಯಾಯ್ ಅವರು ಹೇಳಿದ್ದಾರೆ.

ಕಳೆದ ವರ್ಷ ಕಾನ್ಪುರದಲ್ಲಿ ನಡೆದ ರೈಲು ಅಪಘಾತ ಪ್ರಕರಣವೊಂದರಲ್ಲಿ 150 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಶಂಶುಲ್ ಹುದಾ ಭಾರತದ ಪೊಲೀಸರಿಗೆ ಬೇಕಾದವ ವ್ಯಕ್ತಿಯಾಗಿದ್ದ ಎಂಬುದನ್ನು ನಾವು ಕೇಳಿದ್ದೆವು. ವಿಧ್ವಂಸಕ ಚಟುವಟಿಕೆಗಳಲ್ಲಿ ಹುದಾ ಶಾಮೀಲಾಗಿರುವ ಸಾಧ್ಯತೆಗಳನ್ನು ಬಯಲಿಗೆಳೆಯುವ ತನಿಖೆಯಲ್ಲಿ ನೇಪಾಳ ಪೊಲೀಸರು ಭಾರತೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆಂದು ಎಂದು ಅವರು ಹೇಳಿದ್ದಾರೆ.

ಶಂಶುಲ್ ಜೊತೆಗೆ ಇನ್ನು ಮೂವರು ಆರೋಪಿಗಳು ಕೂಡ ಬಂಧನಕ್ಕೊಳಪಡಿಸಲಾಗಿದ್ದು, ಆರೋಪಿಗಳನ್ನು ಬ್ರಿಜ್ ಕಿಶೋರ್ ಗಿರಿ, ಆಶಿಷ್ ಸಿಂಗ್ ಮತ್ತು ಉಮೇಶ್ ಕುಮಾರ್ ಕೂರ್ಮಿ ಎಂದು ಗುರ್ತಿಸಲಾಗಿದೆ. ಮೂವರು ಆರೋಪಿಗಳು ದಕ್ಷಿಣ ನೇಪಾಳದ ಕಲಯ್ಯ ಜಿಲ್ಲೆಯವರು ಎಂದು ತಿಳಿದುಬಂದಿದೆ.

ಶಂಶುಲ್ ಹುದಾ ಹಾಗೂ ಮೂವರು ಪ್ರಮುಖ ಆರೋಪಿಗಳನ್ನು ಇಂಟರ್ ಪೋಲ್ ನೆರವಿನೊಂದಿಗೆ ದುಬೈನಿಂದ ನೇಪಾಳಕ್ಕೆ ಪೊಲೀಸರು ಕರೆತಂದಿದ್ದರು ಎಂದು ಉಪಾಧ್ಯಾಯ್ ಅವರು ಹೇಳಿದ್ದಾರೆ.

ಬಂಧಿನಾಗಿರುವ ಹುದಾ ಅಂತರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್ ಗಳೊಂದಿಗೆ ನಂಟು ಹೊಂದಿದ್ದ. ನೇಪಾಳದ ಬಾರಾ ಜಿಲ್ಲೆಯಲ್ಲಿ ನಡೆದ ಎರಡು ಕೊಲೆ ಪ್ರಕರಣಗಳಲ್ಲಿ ಹುದಾ ಭಾಗಿಯಾಗಿದ್ದ. ಈತ ನೇಪಾಳ ಮತ್ತು ಭಾರತದಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದ. ಜಾಲಾ ಜಿಲ್ಲೆಯ ನ್ಯಾಯಾಲಯದಲ್ಲಿ ಈತನ ವಿರುದ್ಧ ಈ ಮೊದಲೇ ಪ್ರಕರಣಗಳು ದಾಖಲಾಗಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.

ಕಾನ್ಪುರ ರೈಲು ದುರಂತ ಪ್ರಕರಣದಲ್ಲಿ ಪಾಕಿಸ್ತಾನದ ಇಸಿಸ್ ಕೈವಾಡ ಇರುವುದಾಗಿ ಶಂಕಿತಲಾಗಿತ್ತು. ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಬಿಹಾರ ಪೊಲೀಸರು ಮೂವರು ಶಂಕಿತರನ್ನು ಬಂಧನಕ್ಕೊಳಪಡಿಸಿದ್ದರು. ಬಂಧಿತ ಉಗ್ರರು ಪಾಕ್ ಐಸ್ಐ ಗುಪ್ತಚರ ಸಂಸ್ಥೆಯ ಆಣತಿಯ ಮೇರೆಗೆ ಭಾರತೀಯ ರೈಲ್ವೇಯನ್ನು ಗುರಿಯಾಗಿಟ್ಟುಕೊಂಡು ರೈಲು ವಿಧ್ವಂಸಕ ಕೃತ್ಯ ನಡೆಸಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದರು.

ಬಿಹಾರ ಪೊಲೀಸರು ಮಾಹಿತಿ ನೀಡಿರುವ ಪ್ರಕಾರ ಪಾಕಿಸ್ತಾನ ಐಎಸ್ಐ ನಂಟು ಹೊಂದಿರುವ ಮೂವರು ಬಂಧಿತರಿಗೆ ಹುದಾ ಜೊತೆಗೆ ನಂಟು ಹೊಂದಿರುವ ನೇಪಾಳ ವ್ಯಕ್ತಿಯೊಬ್ಬ ತಲಾ ರೂ.3 ಲಕ್ಷ ಹಣವನ್ನು ಕೊಟ್ಟಿದ್ದಾನೆಂದು ಹೇಳಿದ್ದಾರೆ.

Comments are closed.