ದೆಹಲಿ: ಆಗ್ನೇಯ ದೆಹಲಿಯ ಜೈತ್ಪುರ್ ಪ್ರದೇಶದಲ್ಲಿ ಎಟಿಎಂ ಮುಂದೆ ಇದ್ದ ಸಾಲು ನೋಡಿ ಪ್ರಧಾನಿ ಮೋದಿಯವರನ್ನು ಬೈದ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ವರದಿಯಾಗಿದೆ.
45ರ ಹರೆಯದ ಲಲ್ಲನ್ ಸಿಂಗ್ ಕುಶ್ವಾಹ ಎಂಬ ವ್ಯಕ್ತಿ ಇಸ್ಮಾಯಿಲ್ಪುರ್ ನಲ್ಲಿರುವ ಅಂಗಡಿಯೊಂದಕ್ಕೆ ಟೀವಿ ಖರೀದಿಸಲೆಂದು ಹೋದಾಗ ಆ ಅಂಗಡಿಯ ಪಕ್ಕದಲ್ಲಿದ್ದ ಎಟಿಎಂ ಮುಂದೆ ಜನ ಸಾಲು ಹಟ್ಟಿ ನಿಂತಿದ್ದರು.
ಇದನ್ನು ನೋಡಿದ ಕುಶ್ವಾಹಾ, ಮೋದಿಯವರು ನೋಟು ರದ್ದು ಮಾಡಿದ್ದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿ ಮೋದಿಯವರಿಗೆ ಬೈದಿದ್ದಾರೆ.
ಆ ಹೊತ್ತಿಗೆ ಎಟಿಎಂ ಪಕ್ಕ ಇದ್ದ ಇನ್ನೊಂದು ಅಂಗಡಿಯ ಮಾಲೀಕ ಆಸ್ತಿಕ್ ಎಂಬಾತ ಕುಶ್ವಾಹ ಅವರನ್ನು ಪ್ರಶ್ನಿಸಿ ಜಗಳ ಮಾಡಿದ್ದಾನೆ. ನಂತರ ಕ್ರಿಕೆಟ್ ಸ್ಟಂಪ್ನಿಂದ ತಲೆಗೆ ಹೊಡೆದಿದ್ದಾನೆ ಎಂದು ಕುಶ್ವಾಹಾ ದೂರಿದ್ದಾರೆ.
ಆತನ ಹೊಡೆತದಿಂದ ತಲೆಗೆ ಗಂಭೀರ ಗಾಯವಾಗಿದ್ದು, ಮೂರು ಹೊಲಿಗೆ ಹಾಕಲಾಗಿದೆ ಎಂದು ಕುಶ್ವಾಹ ಹೇಳಿದ್ದಾರೆ.
ಈ ಘಟನೆ ಬಗ್ಗೆ ಜೈತ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.