ಲಕ್ನೋ: ಉತ್ತರ ಪ್ರದೇಶದ ಬ್ಯಾಂಕ್ವೊಂದರ ಮುಂದೆ ಹಣಕ್ಕಾಗಿ ಜನ ಕ್ಯೂ ನಿಂತಿದ್ದ ವೇಳೆ ದೊಡ್ಡ ಗಲಾಟೆಯೇ ನಡೆದಿದೆ. ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್ ಜನರತ್ತ ಗನ್ ತೋರಿಸಿದ್ದು ಅಲ್ಲಿದ್ದ ಮಹಿಳೆಯರು ಕಾಂಪೌಂಡ್ ಹಾರಿ ಬಂದು ಸೆಕ್ಯೂರಿಟಿಗೆ ಹೊಡೆದಿದ್ದಾರೆ.
ಉತ್ತರಪ್ರದೇಶದ ಬುಲಂದ್ಶಹರ್ನಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಂದೆ ಹಣ ಡ್ರಾ ಮಾಡಲು ಜನ ಕ್ಯೂ ನಿಂತಿದ್ರು. ಬ್ಯಾಂಕ್ನಲ್ಲಿ ಹಣದ ಕೊರತೆ ಇತ್ತು ಎಂದು ಹೇಳಲಾಗಿದೆ. ಈ ನಡುವೆ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್ ಹಾಗೂ ಕ್ಯೂನಲ್ಲಿ ನಿಂತಿದ್ದ ಮಹಿಳೆಯರ ಮಧ್ಯೆ ವಾಗ್ವಾದ ನಡೆದಿದೆ. ಬ್ಯಾಂಕ್ ಕಾವಲಿಗೆ ನಿಯೋಜಿಸಲಾಗಿದ್ದ ಹೆಡ್ ಕಾನ್ಟೆಬಲ್ ಜಸ್ವೀರ್ ಸಿಂಗ್ ಜನರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜನರಿಗೆ ಗನ್ ತೋರಿಸಿ ಹಿಂದೆ ತಳ್ಳುತ್ತಿದ್ದ ಜಸ್ವೀರ್ ಸಿಂಗ್ಗೆ ಮಹಿಳೆಯರು ಕಾಂಪೌಂಡ್ ಹಾರಿ ಬಂದು ಹೊಡೆದಿದ್ದಾರೆ. ಈ ವೇಳೆ ಜಸ್ವೀರ್ ಕೂಡ ಮಹಿಳೆಗೆ ಹೊಡೆಯೋದನ್ನ ವಿಡಿಯೋದಲ್ಲಿ ನೋಡಬಹುದು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಬ್ಯಾಂಕ್ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರಾದ್ರೂ ಯಾವುದೇ ಪ್ರಯೋಜನವಾಗಲಿಲ್ಲ.
ಬಳಿಕ ಜಸ್ವೀರ್ ಸಿಂಗ್ ಗಾಳಿಯಲ್ಲಿ ಗುಂಡು ಹಾರಿಸಿದ್ರೂ ಜನ ಅಲ್ಲಿಂದ ಕದಲಲಿಲ್ಲ. ಕೆಲವು ಮಹಿಳೆಯರು ಜಸ್ವೀರ್ ಮೇಲೆ ಚಪ್ಪಲಿ ಎಸೆದ ಘಟನೆಯೂ ನಡೆಯಿತು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪೇದೆ ಜಸ್ವೀರ್ ಸಿಂಗ್ರನ್ನು ಅಲ್ಲಿಂದ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಿದ್ರು. ಸದ್ಯಕ್ಕೆ ಜಸ್ವೀರ್ ಸಿಂಗ್ರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
Comments are closed.