ಶ್ರೀನಗರ: ಹಿಜ್ಬುಲ್ ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯನ್ನು ಮುಂದಿಟ್ಟುಕೊಂಡು ಪ್ರತ್ಯೇಕತಾವಾದಿಗಳು ನಡೆಸಲು ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯನ್ನು ಭದ್ರತಾ ಪಡೆಗಳು ತಡೆದಿದ್ದು, ಶ್ರೀನಗರದಲ್ಲಿ 144 ಸೆಕ್ಷನ್ ಜಾರಿ ಮಾಡುವ ಮೂಲಕ ಪ್ರತ್ಯೇಕತಾವಾದಿಗಳನ್ನು ಗೃಹಬಂಧನದಲ್ಲಿರಿಸಿದ್ದಾರೆ.
ಹಿಜ್ಬುಲ್ ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಾಗಿ ಬರೊಬ್ಬರಿ 6 ತಿಂಗಳುಗಳೇ ಕಳೆದು ಹೋಗಿದೆ. ವಾನಿ ಹತ್ಯೆ ಬಳಿಕ ಪ್ರಕ್ಷುಬ್ದಗೊಂಡಿದ್ದ ಕಾಶ್ಮೀರ ಕೂಡ ದಿನಗಳದಂತೆ ತಣ್ಣಗಾಗಿದೆ. ಈ ನಡುವೆ ತಮ್ಮ ಬೆಳೆ ಬೇಯಿಸಿಕೊಳ್ಳಲು ಹಾಗೂ ಕಾಶ್ಮೀರದಲ್ಲಿ ಮಾಯವಾಗುತ್ತಿರುವ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಹವಣಿಸುತ್ತಿರುವ ಪ್ರತ್ಯೇಕತಾವಾದಿಗಳು ಮತ್ತದೇ ಬುರ್ಹಾನ್ ವಾನಿ ಹತ್ಯೆಯನ್ನು ಖಂಡಿಸಿ ಇಂದು ಪ್ರತಿಭಟನಾ ರ್ಯಾಲಿಗೆ ಕರೆ ನೀಡಿವೆ. ಆದರೆ ಪ್ರತ್ಯೇಕತಾವಾದಿಗಳ ಈ ಪ್ರಯತ್ನಕ್ಕೆ ಕಾಶ್ಮೀರದ ಪೊಲೀಸ್ ಇಲಾಖೆ ಹಾಗೂ ಸೇನಾಪಡೆಗಳು ತಣ್ಣೀರೆರಚಿದ್ದು, ಶ್ರೀನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಾದ ಜಮ್ಮು, ಪುಲ್ವಾಮ, ಬುರ್ದ್ವಾನ್ ನಂತಹ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಮಾಡಿವೆ.
ಆ ಮೂಲಕ ಪ್ರತ್ಯೇಕತಾ ವಾದಿಗಳ ಉದ್ದೇಶಿತ ಪ್ರತಿಭಟನಾ ರ್ಯಾಲಿಗೆ ಬ್ರೇಕ್ ಹಾಕಿವೆ. ಅಂತೆಯೇ ಪ್ರಮುಖ ಪ್ರತ್ಯೇಕತಾವಾದಿ ಮುಖಂಡರಾದ ಸೈಯದ್ ಅಲಿ ಶಾ ಗಿಲಾನಿ, ಮಿರ್ವೈಜ್ ಉಮರ್ ಫಾರೂಕ್, ಮಹಮದ್ ಯಾಸಿನ್ ಮಲ್ಲಿಕ್ ಅವರನ್ನು ಅಘೋಷಿತ ಗೃಹಬಂಧನದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಪೈಕಿ ಗಿಲಾನಿ ಅವರನ್ನು ಈ ಹಿಂದೆಯೂ ಗೃಹ ಬಂಧನದಲ್ಲಿರಿಸಲಾಗಿತ್ತು.
ಕಣಿವೆ ರಾಜ್ಯದಲ್ಲಿ ಕುಸಿದ ಪ್ರತ್ಯೇಕತಾವಾದಿಗಳ ಪ್ರಭಾವ
ಇನ್ನು ಬುರ್ಹಾನ್ ವಾನಿ ಹತ್ಯೆ ಬಳಿಕ ನಡೆದ ಹಿಂಸಾಚಾರದಲ್ಲಿ ಪ್ರತ್ಯೇಕತಾವಾದಿಗಳ ಕುಮಕ್ಕು ನೀಡಿದ್ದರು ಎಂಬ ಮಾತುಗಳು ಕೇಳಿಬರುತ್ತಿರುವಂತೆಯೇ ಇತ್ತ ಮತ್ತೆ ಕಾಶ್ಮೀರದ ಶಾಂತಿಗೆ ಭಂಗತರಲು ಮುಖಂಡರು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಇಂದು ಶ್ರೀನಗರದ ಲಾಲ್ ಚೌಕ್ ನಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದು, ಆದರೆ ಈ ರ್ಯಾಲಿಗೆ ಕಾಶ್ಮೀರದಲ್ಲಿ ಯಾವುದೇ ರೀತಿ ಬೆಂಬಲ ವ್ಯಕ್ತವಾಗಿಲ್ಲ. ಒಂದೆಡೆ ಭದ್ರತಾ ಪಡೆಗಳು ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಪ್ರತ್ಯೇಕತಾವಾದಿಗಳಿಗೆ ಕಡಿವಾಣ ಹಾಕಿದ್ದರೆ, ಮತ್ತೊಂದೆಡೆ ಕಾಶ್ಮೀರ ಜನತೆಯೇ ಪ್ರತಿಭಟನಾ ರ್ಯಾಲಿಯಿಂದ ದೂರು ಉಳಿದಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ತೆರೆದು ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಪ್ರತ್ಯೇಕತಾವಾದಿಗಳ ಪ್ರತಿಭಟನಾ ರ್ಯಾಲಿಗೆ ಅಸಮ್ಮತಿ ಸೂಚಿಸಿದ್ದಾರೆ.
ರಾಷ್ಟ್ರೀಯ
Comments are closed.