ನವದೆಹಲಿ: ಇಲ್ಲಿಯವರೆಗೆ ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿದ 15 ಪಾಕ್ ರೇಂಜರ್ಗಳನ್ನು ಹತ್ಯೆ ಮಾಡಿದ್ದೇವೆ ಎಂದು ಗಡಿ ರಕ್ಷಣಾ ದಳ ಶುಕ್ರವಾರ ಹೇಳಿದೆ.
ನಿನ್ನೆ ಅರ್ನಿಯಾ ವಲಯದಲ್ಲಿ ಬಿಎಸ್ಎಫ್ ಯೋಧರು ನಡೆಸಿದ ಪ್ರತಿದಾಳಿಗೆ ಪಾಕಿಸ್ತಾನದ ಒಬ್ಬ ರೇಂಜರ್ ಸಾವನ್ನಪ್ಪಿದ್ದನು. ಈ ದಾಳಿಯಲ್ಲಿ ಓರ್ವ ಬಿಎಸ್ಎಫ್ ಯೋಧ ಹತನಾಗಿದ್ದು, 13 ನಾಗರಿಕರಿಗೆ ಗಾಯಗಳಾಗಿತ್ತು.
ಸೆಪ್ಟೆಂಬರ್ 28-29 ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿದ ನಂತರ ಪಾಕಿಸ್ತಾನದಿಂದ ನಡೆದ ಅಪ್ರಚೋದಿತ ದಾಳಿಯಲ್ಲಿ 5 ಭಾರತೀಯರು ಹತ್ಯೆಯಾಗಿದ್ದು, 34 ಮಂದಿಗೆ ಗಾಯಗಳಾಗಿತ್ತು.
ಅಕ್ಟೋಬರ್ 21 ರಂದು ಕಥುವಾ ಪ್ರದೇಶದ ಹಿರಾನಗರದಲ್ಲಿ ಬಿಎಸ್ಎಫ್ 7 ಪಾಕಿಸ್ತಾನಿ ರೇಂಜರ್ಗಳನ್ನು ಮತ್ತು ಓರ್ವ ಉಗ್ರನನ್ನು ಹತ್ಯೆಗೈದಿತ್ತು.
ಅಕ್ಟೋಬರ್ 25 ರಂದು ರಜೌರಿ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಇಬ್ಬರು ಅಥವಾ ಮೂವರು ಪಾಕಿಸ್ತಾನಿ ಯೋಧರು ಹತ್ಯೆಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆದಾಗ್ಯೂ, ಪಾಕಿಸ್ತಾನ ಶುಕ್ರವಾರವೂ ಅಂತರರಾಷ್ಟ್ರೀಯ ಗಡಿಭಾಗದಲ್ಲಿ ಅಪ್ರಚೋದಿತ ದಾಳಿ ನಡೆಸಿದೆ.
ಸುಂದರ್ಬನಿ, ಪಲ್ಲನ್ನಾಲಾ ಮತ್ತು ರಜೌರಿ ಮತ್ತು ಜಮ್ಮು ಜಿಲ್ಲೆಯ ನೌಶೆರಾ ಪ್ರದೇಶದಲ್ಲಿ ಪಾಕ್ ಸೇನೆ ಅಪ್ರಚೋದಿತ ದಾಳಿ ನಡೆಸಿದೆ ಎಂದು ಬಿಎಸ್ಎಫ್ ವಕ್ತಾರರು ಹೇಳಿದ್ದಾರೆ.
ಪಾಕ್ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದು, ನಾವು ತಕ್ಕ ಉತ್ತರನ್ನು ನೀಡುತ್ತಿದ್ದೇವೆ. ಈ ಪ್ರತಿದಾಳಿಯಲ್ಲಿ ಈವರೆಗೆ ಸರಿಸುಮಾರು 15 ಪಾಕ್ ರೇಂಜರ್ ಗಳು ಹತ್ಯೆಯಾಗಿರಬಹುದು ಎಂದು ಬಿಎಸ್ಎಫ್ ಹಿರಿಯ ಅಧಿಕಾರಿ ಅರುಣ್ ಕುಮಾರ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
Comments are closed.