ಹೈದರಾಬಾದ್: ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರು ಡಸ್ಟರ್ನಿಂದ ಹೊಡೆದಿದ್ದು, ತೀವ್ರಗಾಯಗೊಂಡ ವಿದ್ಯಾರ್ಥಿಯನ್ನು ಶಸ್ತ್ರ ಚಿಕಿತ್ಸೆಗೊಳಪಡಿಸಲಾಗಿದೆ.
ಇಲ್ಲಿನ ರಾಜಧಾನಿ ಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ತರಗತಿಗೆ ಗೈರು ಹಾಜರಾಗುತ್ತಿದ್ದ ವಿದ್ಯಾರ್ಥಿ 14 ರ ಹರೆಯದ ಸುರೇಶ್ ಕುಮಾರ್ ಮೇಲೆ ಕೋಪಗೊಂಡು ಶಿಕ್ಷಕರೊಬ್ಬರು ಮರದ ಡಸ್ಟರ್ ನಲ್ಲಿ ಹೊಡೆದಿದ್ದಾರೆ.
ಹೊಡೆತದಿಂದ ಪ್ರಜ್ಞೆ ತಪ್ಪಿದ ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ವಿದ್ಯಾರ್ಥಿಯ ತಲೆಯೊಳಗೆ ರಕ್ತ ಹೆಪ್ಪು ಗಟ್ಟಿದ್ದು ಆತನನ್ನು ಶಸ್ತ್ರ ಚಿಕಿತ್ಸೆಗೊಳಪಡಿಸಲಾಗಿದೆ.
ಇದೀಗ ವಿದ್ಯಾರ್ಥಿಯ ಆರೋಗ್ಯ ಸುಧಾರಿಸಿದ್ದು, ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣದ ಬಗ್ಗೆ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಜಗದ್ಗಿರಿಗುಟ್ಟ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ. ಶ್ರೀನಿವಾಸ್ ಹೇಳಿದ್ದಾರೆ.
Comments are closed.