ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ತೀವ್ರವಾಗಿರುವ ಈ ಹೊತ್ತಿನಲ್ಲಿ ದೀಪಾವಳಿ ಹಬ್ಬ ಆಚರಿಸದೆ ದೇಶ ಕಾಯುತ್ತಿರುವ ಯೋಧರಿಗೆ ದೀಪಾವಳಿ ಶುಭಾಶಯ ಸಂದೇಶ ಕಳುಹಿಸುವ ಮೂಲಕ ಅವರಿಗೆ ಬೆಂಬಲ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ನಾನು #Sandesh2Soldiers ನಲ್ಲಿ ನನ್ನ ಸಂದೇಶವನ್ನು ಟ್ಯಾಗ್ ಮಾಡುವ ಮೂಲಕ ಯೋಧರಿಗೆ ನನ್ನ ಶುಭಾಷಯವನ್ನು ತಲುಪಿಸಿದ್ದೇನೆ. ನೀವೂ ಸಹ ನಿಮ್ಮ ಸಂದೇಶವನ್ನು ಯೋಧರಿಗೆ ಕಳುಹಿಸಿ ಅವರ ಸ್ಥೈರ್ಯವನ್ನು ಹೆಚ್ಚಿಸಿ ಎಂದು ಮೋದಿ ತಮ್ಮ ಟ್ವಿಟ್ನಲ್ಲಿ ತಿಳಿಸಿದ್ದಾರೆ.
ಈ ದೀಪಾವಳಿಯಲ್ಲಿ ನಮ್ಮ ವೀರ ಯೋಧರನ್ನು ನಾವು ನೆನೆಯಬೇಕಿದೆ. ದೇಶದ 125 ಕೋಟಿ ಜನರು ನಮ್ಮ ಸೈನಿಕರ ಜತೆಗೆ ನಿಂತರೆ ಅವರ ಆತ್ಮಸ್ಥೈರ್ಯ 125 ಕೋಟಿ ಪಟ್ಟು ಹೆಚ್ಚುತ್ತದೆ ಎಂದು ಮೋದಿ ತಿಳಿಸಿದ್ದು, ಸಾರ್ವಜನಿಕರಿಗೆ ಸಂದೇಶ ಕಳುಹಿಸಲು ಕೋರಿದ್ದಾರೆ. ಜತೆಗೆ ಸಂದೇಶ ಕಳುಹಿಸುವಂತೆ ಕೋರಿ ಒಂದು ವಿಡಿಯೋವನ್ನೂ ಸಹ ಶೇರ್ ಮಾಡಿದ್ದಾರೆ.
ಸಾರ್ವಜನಿಕರು ತಮ್ಮ ಸಂದೇಶವನ್ನು ಟ್ವಿಟರ್ನಲ್ಲಿ #Sandesh2Soldiers ನಲ್ಲಿ ಟ್ಯಾಗ್ ಮಾಡಿ ಕಳುಹಿಸಬಹುದು ಅಥವಾ MyGov.in ವೆಬ್ಸೈಟ್ನಲ್ಲೂ ಸಂದೇಶ ಕಳುಹಿಸಬಹುದು. ಜತೆಗೆ ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ವಿಶೇಷ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಸಂದೇಶವನ್ನು ಸೈನಿಕರಿಗೆ ತಲುಪಿಸಲಿದೆ.
ಮೋದಿ ಟ್ವಿಟರ್ನಲ್ಲಿ ಈ ಸಂದೇಶವನ್ನು ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಸಾವಿರಾರು ಜನರು ಮೋದಿ ಟ್ವಿಟ್ ಅನ್ನು ರೀ ಟ್ವಿಟ್ ಮಾಡಿದ್ದಾರೆ ಮತ್ತು ಸಂದೇಶವನ್ನು ಕಳುಹಿಸಿದ್ದಾರೆ.
Comments are closed.