ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇ ಪದೇ ಉಗ್ರರು ದಾಳಿ ನಡೆಸುತ್ತಿದ್ದು, ಶುಕ್ರವಾರ ಸಂಜೆ ಝಕುರಾದಲ್ಲಿ ನಡೆದ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮನಾಗಿದ್ದಾನೆ ಎಂದು ತಿಳಿದುಬಂದಿದೆ.
ಶ್ರೀನಗರದಲ್ಲಿ ಭದ್ರತಾ ಕಾರ್ಯ ಮುಗಿಸಿಕೊಂಡು ಯೋಧರು ತಮ್ಮ ತಮ್ಮ ಕ್ಯಾಂಪ್ ಗಳಿಗೆ ಸೇನಾ ವಾಹನದಲ್ಲಿ ವಾಪಸ್ ಆಗುತ್ತಿದ್ದಾಗ ಝಕುರಾ ಪ್ರದೇಶದಲ್ಲಿ ಅವಿತಿದ್ದ 2-3 ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಭಾರತೀಯ ಸೇನೆ ಸುಮಾರು 6 ವಾಹನಗಳು ಗುಂಡೇಟಿನಿಂದ ಜಖಂಗೊಂಡಿದ್ದು, ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಯೋಧರು ಕೂಡ ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ದಾಳಿಕೋರರು ಪರಾರಿಯಾಗಿದ್ದಾರೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಘಟನಾ ಸ್ಥಳದಲ್ಲಿ ಇದೀಗ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಸ್ಥಳೀಯ ಮನೆಗಳಲ್ಲಿ ಉಗ್ರರು ಆಶ್ರಯ ಪಡೆದಿರುವ ಸಾಧ್ಯತೆ ಮೇರೆಗೆ ಸೇನಾಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.
ಇನ್ನು ಗಾಯಗೊಂಡಿರುವ 8 ಮಂದಿಯ ಪೈಕಿ ಓರ್ವ ಪೊಲೀಸ್ ಕೂಡ ಸೇರಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಅವರನ್ನು ಸೇನಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜಧಾನಿ ಶ್ರೀನಗರದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶ ಝಕುರಾದಲ್ಲಿ ಹಲವು ಸರ್ಕಾರಿ ಕಚೇರಿಗಳು, ವಾಣಿಜ್ಯ ಕಟ್ಟಡಗಳು ಹಾಗೂ ಕಾರ್ಖಾನೆಗಳಿದ್ದು, ಉಗ್ರರು ಅಡಗಿಕೊಳ್ಳಲು ಇದೇ ಜಾಗವನ್ನೇ ಆಯ್ಕೆ ಮಾಡಿಕೊಂಡು ದಾಳಿ ಮಾಡಿದ್ದಾರೆ.
Comments are closed.