ರಾಷ್ಟ್ರೀಯ

ಪ್ಯಾಂಪೋರ್ ದಾಳಿ: ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನಾಪಡೆ ಯಶಸ್ವಿ

Pinterest LinkedIn Tumblr

army

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನ ಹೊರವಲಯದ ಸರ್ಕಾರಿ ಕಚೇರಿ ಮೇಲೆ ದಾಳಿ ಮಾಡಿರುವ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನಾಪಡೆಗಳು ಯಶಸ್ವಿಯಾಗಿವೆ. ನಿನ್ನೆ ರಾತ್ರಿ ಓರ್ವ ಉಗ್ರನನ್ನು ಹೊಡೆದುರುಳಿಸಿದ್ದ ಸೇನೆ ಇಂದು ಬೆಳಗ್ಗೆ ಮತ್ತೋರ್ವ ಉಗ್ರನನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಕಟ್ಟಡದಲ್ಲಿ ಇನ್ನೂ ಓರ್ವ ಉಗ್ರ ಅವಿತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಇನ್ನು ಉಗ್ರರು ಅವಿತಿರುವ ಸರ್ಕಾರಿ ಕಟ್ಟಡವನ್ನು ನಾಲ್ಕೂ ಮೂಲೆಯಿಂದ ಸುತ್ತುವರೆದಿರುವ ಭಾರತೀಯ ಸೇನೆಯ ಸೈನಿಕರು ಯಾವುದೇ ಕಾರಣಕ್ಕೂ ಉಗ್ರರು ತಪ್ಪಿಸಿಕೊಳ್ಳದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಒಂದು ವೇಳೆ ಉಗ್ರರು ಹೊರಗೆ ಬಂದರೆ ಕೂಡಲೇ ಅವರನ್ನು ಹತ್ಯೆಗೈಯಲು ಸಿದ್ಧರಾಗಿ ನಿಂತಿದ್ದಾರೆ. ಅದರಂತೆ ಇಂದು ಬೆಳಗ್ಗೆ ತಪ್ಪಿಸಿಕೊಳ್ಳಲು ಯತ್ನಿಸಿದ ಓರ್ವ ಉಗ್ರನನ್ನು ಭದ್ರತಾಪಡೆಯ ಸಿಬ್ಬಂದಿಗಳು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಅಂತೆಯೇ ಕಟ್ಟದಲ್ಲಿ ಮತ್ತೋರ್ವ ಉಗ್ರ ಅಡಗಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಅಡಗಿ ಕುಳಿತಿರುವ ಉಗ್ರನಿಗಾಗಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸುತ್ತಿವೆ. ಅಂತೆಯೇ ಉಗ್ರರು ತಂದಿರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ಕುರಿತೂ ಮಾಹಿತಿ ಲಭ್ಯವಾಗಿದ್ದು, ತುಂಬಾ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.