ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆಯು ನಿರ್ದಿಷ್ಟ ದಾಳಿ ನಡೆಸಿರುವುದು ಸುಳ್ಳು ಸುದ್ದಿ ಎಂದು ಪಾಕಿಸ್ತಾನ ಹೇಳುತ್ತಿದೆ. ಹೀಗಾಗಿ ದಾಳಿ ನಡೆದಿರುವುದನ್ನು ಸಾಬೀತು ಪಡಿಸಬೇಕಿದ್ದು, ಇದಕ್ಕೆ ಸಂಬಂಧಿಸಿದ ಸಾಕ್ಷ್ಯ ಬಿಡುಗಡೆ ಮಾಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆಗ್ರಹಿಸಿದ್ದಾರೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿದ ವಿಡಿಯೊ ಸಂದೇಶದಲ್ಲಿ ಕೇಜ್ರಿವಾಲ್ ಈ ಆಗ್ರಹವನ್ನು ತಿಳಿಸಿದ್ದರು. ಆದಾಗ್ಯೂ, ಮೋದಿಯವರಿಂದ ಕೇಜ್ರಿವಾಲ್ ಅವರ ಪ್ರಶ್ನೆಗೆ ಯಾವುದೇ ಉತ್ತರ ಬಂದಿಲ್ಲ.
ಇತ್ತ ಬಿಜೆಪಿ ಮುಖಂಡ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಅವರು ಪಾಕಿಸ್ತಾನದಲ್ಲಿ ಪ್ರಮುಖ ಸುದ್ದಿಯಾಗುತ್ತಿದ್ದಾರೆ ಎಂದು ಹೇಳಿದ ಪ್ರಸಾದ್, ಕೇಜ್ರಿವಾಲ್ ಅವರಿಗೆ ನಮ್ಮ ಸೇನೆಯ ಧೈರ್ಯದ ಬಗ್ಗೆ ಸಂದೇಹವಿದೆಯೇ? ಕೇಜ್ರಿವಾಲ್ ಯಾಕೆ ಪಾಕಿಸ್ತಾನದ ಮಾತಿಗೆ ಬೆಲೆಕೊಡುತ್ತಿದ್ದಾರೆ?ಎಂದು ಪ್ರಶ್ನಿಸಿದ್ದಾರೆ.
ಅದೇ ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗಲೂ ಪಾಕ್ ಮೇಲೆ ನಿರ್ದಿಷ್ಟ ದಾಳಿ ನಡೆದಿತ್ತು. ಆದರೆ ನಾವು ಅದನ್ನು ಬಹಿರಂಗ ಪಡಿಸಿರಲಿಲ್ಲ ಎಂದು ಹೇಳಿದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರ ಹೇಳಿಕೆ ವಿರುದ್ಧವೂ ಪ್ರಸಾದ್ ಕಿಡಿ ಕಾರಿದ್ದಾರೆ, ಚಿದಂಬರಂ ಅವರು ಕೂಡಾ ನಮ್ಮ ಸೇನಾಪಡೆಯ ಸಾಮರ್ಥ್ಯದ ಬಗ್ಗೆ ಸಂದೇಹ ವ್ಯಕ್ತ ಪಡಿಸುವವರ ಗುಂಪಿನಲ್ಲಿ ಸೇರಿದ್ದಾರೆ ಎಂದು ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
Comments are closed.