ಕೋಲ್ಕತ್ತಾ: ಬಿಜೆಪಿ ಸಿದ್ಧಾಂತಕ್ಕೂ ನಮಗೂ ಅಜಗಜಾಂತರ. ಹಾಗಾಗಿ ನಾವು ಯಾವಾಗಲೂ ಪಕ್ಷದಿಂದ ದೂರ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿರೋಧಿಗಳ ನಿರಂತರ ಅಪ ಪ್ರಚಾರದ ಹೊರತಾಗಿಯೂ ನಮ್ಮ ಪಕ್ಷ ಅಭೂತಪೂರ್ವ ಜಯ ಗಳಿಸಿರುವುದು ರಾಜ್ಯದ ಜನತೆ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಭಾವುಕರಾಗಿ ಹೇಳಿದರು.
ಮತ ಎಣಿಕೆ ನಂತರ ತಮ್ಮ ಪಕ್ಷ ಪ್ರಚಂಡ ಜಯಭೇರಿ ಬಾರಿಸಿದ ಸಂತಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಿದೆ.
ನಮ್ಮ ವಿರೋಧಿಗಳು ನನ್ನ ಹಾಗೂ ನನ್ನ ಸರ್ಕಾದ ವಿರುದ್ಧ ಮಾಡಿದ ಆರೋಪಗಳು ಸುಳ್ಳು ಎಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡಿರುವುದು ನನಗೆ ಅತೀವ ಸಂತಸವಾಗಿದೆ. ವಿರೋಧಿಗಳು ಹೆಜ್ಜೆ ಹೆಜ್ಜೆಗೂ ನನಗೆ ತೊಂದರೆ ಕೊಡುತ್ತಲೇ ಇದ್ದರು. ಆದರೆ, ಜನ ಅವರ ಮಾತನ್ನು ನಂಬಲಿಲ್ಲ. ಏಕೆಂದರೆ, ಅರ್ಜುನನಂತೆ ನನ್ನ ಗುರಿ ಸ್ಪಷ್ಟವಾಗಿತ್ತು. ನನ್ನ ಆ ಸ್ಪಷ್ಟ ಗುರಿಯಿಂದಲೇ ಪಶ್ಚಿಮ ಬಂಗಾಳದ ಜನತೆ ಈ ಅಭೂತಪೂರ್ವ ಜಯ ತಂದಿತ್ತಿದ್ದಾರೆ ಎಂದು ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಬಿಜೆಪಿಯ ತತ್ವ-ಸಿದ್ಧಾಂತಗಳೇ ಬೇರೆ, ಟಿಎಂಸಿ ಸಿದ್ಧಾಂತವೇ ಬೇರೆ. ಹಾಗಾಗಿ ನಮ್ಮ ಪಕ್ಷ, ಸರ್ಕಾರ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಮಮತಾ ಮುಂದೆ ಇನ್ನೂ ಏನೇನಾಗಲಿದೆ ಕಾದು ನೋಡಿ. ಒಟ್ಟಾರೆ ಜನರ ಸಂತೋಷವೇ ನಮ್ಮ ಸಂತೋಷ. ನಮ್ಮ ಪ್ರಯತ್ನಗಳೆಲ್ಲ ಜನತೆಯ ಹಿತಾಸಕ್ತಿ, ರಕ್ಷಣೆಗಾಗಿಯೇ ಎಂದು ಹೇಳಿದರು.
Comments are closed.