ಗಯಾ: ಪ್ರಕರಣವೊಂದರ ಆರೋಪಿಯಾಗಿ ಒಂದು ವಾರದಿಂದ ಪೊಲೀಸರ ಕಣ್ತಪ್ಪಿಸಿ ತಲೆ ಮರೆಸಿಕೊಂಡಿದ್ದ ಆಡಳಿತಾರೂಢ ಜೆಡಿಯು ಶಾಸಕಿ ಮನೋರಮಾ ದೇವಿ ಇಂದು ಬೆಳಿಗ್ಗೆ ಇಲ್ಲಿಯ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ.
ಅಡಿಷನಲ್ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶರಣಾದ ಆರೋಪಿ ಶಾಸಕಿಯನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ನ್ಯಾಯಾಂಗ ಬಂಧನಕ್ಕೆ ನ್ಯಾಯಮೂರ್ತಿ ಆದೇಶ ನೀಡುತ್ತಿದ್ದಂತೆ ನ್ಯಾಯಾಲಯದಲ್ಲೇ ಹಾಜರಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಇಲ್ಲಿಯ ಜೈಲಿಗೆ ಕರೆದೊಯ್ದರು.
ಆರೋಪಿ ಶಾಸಕಿ ಶರಣಾಗುವುದು ಬಿಟ್ಟು ಉಳಿದ ಮಾರ್ಗವಿರಲಿಲ್ಲ. ಈಕೆಯ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿತ್ತು.
ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದರು. ಪೊಲೀಸರು ಬಂಧಿಸುವ ಮುನ್ನವೇ ನ್ಯಾಯಾಲಯದಲ್ಲಿ ಶರಣಾಗಿ ಜೈಲು ಸೇರಿದ್ದಾರೆ. ಈಕೆ ಜೈಲು ಸೇರುವ ಮೂಲಕ ಕುಟುಂಬದ ಮೂರು ಮಂದಿ ಜೈಲು ಸೇರಿದಂತಾಗಿದೆ.
ಕೊಲೆ ಆರೋಪಿಯಾಗಿದ್ದ ಶಾಸಕಿಯ ಪುತ್ರ ರಾಕೇಶ್ ರಂಜನ್ ಯಾದವ್ ಅಲಿಯಾಸ್ ರಾಕಿಯಾದವ್ಗಾಗಿ ಪೊಲೀಸರು ಮನೆಯ ಶೋಧನೆ ಮಾಡುವಾಗ ಭಾರತೀಯ ತಯಾರಿಕೆಯ ವಿದೇಶಿ ಮದ್ಯದ ಬಾಟಲಿಗಳು ಶಾಸಕಿ ಮನೆಯಲ್ಲಿ ಸಿಕ್ಕಿದ್ದವು.
ಪೊಲೀಸರ ಕೈಗೆ ಸಿಗದಂತೆ ಒಂದು ವಾರದಿಂದ ತಲೆಮರೆಸಿಕೊಂಡಿದ್ದಳು. ಇದೇ ವೇಳೆ ಶಾಸಕಿಯ ಆಸ್ತಿ ಮುಟ್ಟುಗೋಲಿಗೂ ಪೊಲೀಸರ ನ್ಯಾಯಾಲಯದಲ್ಲಿ ಮನವಿ ಮಾಡಿದೆ. ಪೊಲೀಸರ ಈ ಮನವಿಯ ಮೇಲೆ ನ್ಯಾಯಾಲಯ ಇಂದು ತೀರ್ಪು ನೀಡುತ್ತಿದೆ.
ಶಾಸಕಿ ಪುತ್ರ ರಾಕಿ ಯಾದವ್, 12ನೇ ತರಗತಿಯ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಲೆ ಮಾಡಿದ್ದರು. ತನ್ನ ಕಾರನ್ನು ಹಿಂದಿಕ್ಕಿ ಮುಂದೆ ಸಾಗಿದ್ದೆ ವಿದ್ಯಾರ್ಥಿಯನ್ನು ಗುಂಡಿಕ್ಕಿಕೊಂದಿದ್ದ.
ಕೊಲೆ ಆರೋಪದಲ್ಲಿ ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಆಡಳಿತಾರೂಢ ಜೆಡಿಯು ಶಾಸಕಿಯ ಮಗನ ಈ ದುಂಡಾವರ್ತನೆಯಿಂದಾಗಿ ಆಡಳಿತ ಪಕ್ಷ ತೀವ್ರ ಮುಜುಗರಕ್ಕೆ ಸಿಕ್ಕಿತ್ತು.
ಸರಕಾರದ ವಿರುದ್ಧ ಜನ ಭಾರಿ ಪ್ರತಿಭಟನೆ ನಡೆಸಿದ್ದರು. `ಯಾರೆ ತಪ್ಪು ಮಾಡಿರಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
Comments are closed.