
ನವದೆಹಲಿ (ಪಿಟಿಐ): ಹಣಲೇವಾದೇವಿ ಪ್ರಕರಣದಲ್ಲಿ ತನಿಖೆಗೆ ಒಳಪಡಿಸುವ ನಿಟ್ಟಿನಲ್ಲಿ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಇಂಟರ್ಪೋಲ್ ಬಂಧನ ವಾರೆಂಟ್ ಜಾರಿಗೊಳಿಸುವಂತೆ ಜಾರಿ ನಿರ್ದೇಶನಾಲಯವು ಸಿಬಿಐಯನ್ನು ಕೋರಿದೆ.
ಮದ್ಯ ದೊರೆ ಮಲ್ಯ ಗಡಿಪಾರಿಗೆ ಬ್ರಿಟನ್ ನಿರಾಕರಿಸಿದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
ಮಲ್ಯ ವಿರುದ್ಧ ಇಂಟರ್ಪೋಲ್ನಿಂದ ರೆಡ್ ಕಾರ್ನರ್ ನೋಟಿಸ್ ಪಡೆಯುವಂತೆ ಕೋರಿ ಸಿಬಿಐಗೆ ಇ.ಡಿ ಪತ್ರ ಬರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಟರ್ಪೋಲ್ ವಾರೆಂಟ್ಗಳ ಜಾರಿ ಸಂಬಂಧ ಭಾರತದ ಮಟ್ಟಿಗೆ ಸಿಬಿಐ ತನಿಖಾ ಸಂಸ್ಥೆಯು ನೋಡಲ್ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ.
ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬೇಕಾಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಲು, ಬಂಧಿಸಲು’ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತದೆ. ಆರೋಪಿಗಳ ಹಸ್ತಾಂತರ ಇಲ್ಲವೇ ಅಂತಹ ಕ್ರಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಜಾರಿ ಮಾಡಲಾಗುತ್ತದೆ.