ವಿಜಯವಾಡ: ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ನಾಲ್ಕು ದಿನಗಳ ಪುಟ್ಟಮಗುವೊಂದು ಇರುವೆಗಳು ಕಚ್ಚಿ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ವಿಜಯವಾಡದ ಹನುಮಪೇಟ್ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಇದೀಗ ಈ ವಿಚಾರ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ನಿನ್ನೆಯಷ್ಟೇ ಇಂತಹುದೇ ಘಟನೆ ಸಮೀಪದ ಗುಂಟೂರಿನಲ್ಲಿ ಕೇಳಿಬಂದಿತ್ತು. ಇಲಿಗಳ ದಾಳಿಯಿಂದಾಗಿ ನವಜಾತ ಶಿಶು ಸಾವನ್ನಪ್ಪಿತ್ತು. ಇದರ ಬೆನ್ನಲ್ಲೇ ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ಪುನಾರಾವರ್ತನೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಆಸ್ಪತ್ರೆಯ ಸಿಬ್ಬಂದಿಗಳು ಆರೋಪವನ್ನು ತಳ್ಳಿಹಾಕಿದ್ದು, ಇರುವೆ ಕಚ್ಚಿ ಮಗು ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡಿರುವ ಮಗುವಿನ ತಾಯಿ ನಾನು ಕಣ್ಣು ಬಿಟ್ಟಾಗ ನನ್ನ ಮಗು ಸಾವನ್ನಪ್ಪಿತ್ತು. ಮಗುವಿನ ದೇಹದ ಮೇಲೆಲ್ಲಾ ಇರುವೆಗಳು ಕಚ್ಚಿದ ಗಾಯದ ಕಲೆಗಳಿದ್ದವು ಎಂದು ಕಣ್ಣೀರು ಹಾಕುತ್ತಲೇ ಹೇಳಿದ್ದಾರೆ. ಇನ್ನು ಮಗುವಿನ ಸಾವಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಬಂಧಿಕರು ಆಸ್ಪತ್ರೆ ಮುಂದೆಯೇ ಧರಣಿ ಕುಳಿತು ಸರ್ಕಾರ ಮತ್ತು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಇದೀಗ ಮಗುವಿನ ಸಾವಿನ ವಿಚಾರ ಕಾಡ್ಗಿಚ್ಚಿನಂತೆ ಆಂಧ್ರ ಪ್ರದೇಶದಾದ್ಯಂತ ಹಬ್ಬಿದ್ದುಸ ಸರ್ಕಾರಿ ಆಸ್ಪತ್ರೆಗಳ ಶುಚಿತ್ವದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಸ್ತುತ ಘಟನಾ ಪ್ರದೇಶ ವಿರೋಧ ಪಕ್ಷಗಳ ಮುಖಂಡರು ದೌಡಾಯಿಸುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಗುವಿನ ತಂದೆ ಅಂಜಯ್ಯ ಎಂಬುವವರು ಮೂಲತಃ ಗುಂಟೂರಿನವರಾಗಿದ್ದು, ವೃತ್ತಿಯಲ್ಲಿ ಚಾಲಕರಾಗಿದ್ದಾರೆ. ಸ್ನೇಹಿತರ ಸಲಹೆ ಮೇರೆಗೆ ಗರ್ಭಿಣಿ ಪತ್ನಿಯನ್ನು ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಯಲ್ಲಿ ಗಂಡು ಮಗು ಹುಟ್ಟಿದ ವಿಚಾರ ಕೇಳಿದ್ದ ಕುಟುಂಬಸ್ಥರು ಅತೀವ ಸಂತೋಷದಲ್ಲಿದ್ದರು. ಆದರೆ ಮಗು ಸಾವನ್ನಪ್ಪಿದ ವಿಚಾರ ಕೇಳಿ ಆಘಾತಗೊಂಡಿರುವ ಅವರು ಇದೀಗ ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಜಿ.ಸೃಜನ ಅವರು ತನಿಖೆಗೆ ಆದೇಶಿಸಿದ್ದು, ಖುದ್ದು ಅವರೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಸ್ಥಿತಿಗತಿ ಪರಿಶೀಲಿಸಿದ್ದಾರೆ.