ಡೆಹ್ರಾಡೂನ್: ಶಾಸಕರಿಗೆ ಲಂಚದ ಆಮಿಷ ನೀಡಿದ್ದಾರೆ ಎನ್ನಲಾದ ಸ್ಟಿಂಗ್ ವಿಡಿಯೋದಲ್ಲಿರುವುದು ತಾವೇ ಎಂದು ಉತ್ತರಾಖಂಡ ಮಾಜಿ ಸಿಎಂ ಹರೀಶ್ ರಾವತ್ ಬಹಿರಂಗವಾಗಿ ಒಪ್ಪಿಕೊಂಡಿದ್ದು, ಒಂದೊಮ್ಮೆ ತಪ್ಪು ಮಾಡಿದ್ದರೆ ಬಹಿರಂಗವಾಗಿ ಗಲ್ಲಿಗೇರಿಸಲಿ ಎಂದು ಸವಾಲು ಹಾಕಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಅವರು, ಓರ್ವ ಶಾಸಕರ ಜತೆ ಮಾತುಕತೆ ನಡೆಸುವ ವೇಳೆ ತಾಂತ್ರಿಕವಾಗಿ ಅವರು ಅನರ್ಹಗೊಂಡಿರಲಿಲ್ಲ. ಒಂದೊಮ್ಮೆ ಶಾಸಕರ ಬೆಂಬಲ ಗಳಿಸಲು ಹುದ್ದೆ ಅಥವಾ ಹಣದ ಆಮಿಷ ಒಡ್ಡಿದ್ದರೆ ನಗರದ ಹೃದಯಭಾಗದಲ್ಲಿರುವ ಕ್ಲಾಕ್ಟವರ್ ಮುಂಭಾಗ ಬಹಿರಂಗವಾಗಿ ಗಲ್ಲಿಗೇರಿಸಲಿ ಎಂದಿದ್ದಾರೆ.
ಸ್ಟಿಂಗ್ ದೃಶ್ಯಾವಳಿಯ ಸತ್ಯಾಸತ್ಯತೆ ಪರಿಶೀಲಿಸಲು ಕೇಂದ್ರ ಗೃಹಸಚಿವಾಲಯ ಸಿಡಿಯನ್ನು ಚಂಡೀಗಢದಲ್ಲಿರುವ ಫೋರೆನ್ಸಿಕ್ ಲ್ಯಾಬೋರೇಟರಿಗೆ ಕಳುಹಿಸಿತ್ತು. ಪರೀಕ್ಷೆ ನಡೆಸಿದ ಪ್ರಯೋಗಾಲಯವು ಸಿಡಿಯಲ್ಲಿರುವ ದೃಶ್ಯವು ಸಾಚಾತನದಿಂದ ಕೂಡಿದೆ ಎಂದು ವರದಿ ಸಲ್ಲಿಸಿತ್ತು.