ಅಹಮದಾಬಾದ್, ಏ.29-ಮೇಲ್ವರ್ಗದ ಬಡವರಿಗೂ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಸಿಗುವ ಐತಿಹಾಸಿಕ ನಿರ್ಧಾರವನ್ನು ಗುಜರಾತ್ ಸರ್ಕಾರ ಘೋಷಿಸಿದೆ. ದೇಶದಲ್ಲೇ ಸಂಚಲನ ಮೂಡಿಸಿದ ಪಟೇಲ್ ಸಮುದಾಯ ಪ್ರತಿಭಟನೆಯಿಂದ ನಲುಗಿದ್ದ ಗುಜರಾತ್, ಮುಖ್ಯಮಂತ್ರಿ ಆನಂದಿ ಬೇನ್ ಅವರ ಸರ್ಕಾರದ ಈ ನಿರ್ಧಾರ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಆರು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಎಲ್ಲಾ ಮೇಲ್ವರ್ಗದ ಜಾತಿಗಳಿಗೂ ಈ ಮೀಸಲಾತಿ ಸೌಲಭ್ಯ ಅನ್ವಯವಾಗಲಿದೆ. ಈ ವರೆಗೂ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾತಿ ಸೌಲಭ್ಯ ಸಿಗುತ್ತಿತ್ತು.
ಗುಜರಾತ್ ಸರ್ಕಾರ ಈ ಮೀಸಲಾತಿಯ ಪ್ರಮಾಣದಲ್ಲೇ ಕಡಿತ ಮಾಡಿ ಎಲ್ಲಾ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮೂಲಕ ಮೀಸಲಾತಿಯನ್ನು ಒಟ್ಟು ಪ್ರಮಾಣ ಸುಪ್ರೀಂಕೋರ್ಟ್ ನಿರ್ದೇಶನದಂತೆ ಶೇ.49ರ ಮಿತಿಯಲ್ಲೇ ಇರುವಂತೆ ಎಚ್ಚರಿಕೆ ವಹಿಸಿದೆ. ಮೇ 1 ರಿಂದ ಹೊಸ ಮೀಸಲಾತಿ ಅಧಿಸೂಚನೆ ಮೂಲಕ ಜಾರಿಗೆ ಬರಲಿದ್ದು, ಪಟೇಲ್, ಬ್ರಾಹ್ಮಣ, ಕ್ಷತ್ರಿಯ, ಲೋಹನಾ ಸಮುದಾಯಗಳು ಈ ಸೌಲಭ್ಯ ಪಡೆಯಲಿವೆ.
ಈ ಮೊದಲು ರಾಜಸ್ಥಾನ ಮತ್ತು ಹರಿಯಾಣ ಸರ್ಕಾರಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿತ್ತು. ಆದರೆ ಇನ್ನೂ ಜಾರಿಗೊಂಡಿಲ್ಲ. ಗುಜರಾತ್ ಸರ್ಕಾರ ಇಂದು ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ಎಲ್ಲಾ ಜಾತಿಯ ಬಡವರಿಗೂ ಅನುಕೂಲವಾಗಲಿದೆ. ಮೇಲ್ವರ್ಗ ಬಡವರಿಗೂ ಮೀಸಲಾತಿ ನೀಡುವ ನಿರ್ಧಾರ ಕೈಗೊಂಡಿರುವುದನ್ನು ಸಚಿವ ವಿಜಯ್ ರೂಪಾನಿ ಖಚಿತ ಪಡಿಸಿದ್ದಾರೆ.