ನವದೆಹಲಿ,ಏ.26-ಇಂದು ರಾಜ್ಯಸಭೆ(ಮೇಲ್ಮನೆ)ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ನಾಯಕರ ಜೊತೆ ಬೆರೆತು, ಕೈಕುಲುಕಿ ಕುಶಲ ವಿಚಾರಿಸಿದರು. ರಾಜ್ಯ ಸಭೆ ಕಲಾಪ ಆರಂಭಕ್ಕೆ ಕೆಲ ಸಮಯ ಮೊದಲೇ ಆಗಮಿಸಿದ ಪ್ರಧಾನಿ ವಿವಿಧ ವಿರೋಧಿ ನಾಯಕರನ್ನು ಆತ್ಮೀಯವಾಗಿ ಮಾತನಾಡಿಸಿದರು.
ಕಾಂಗ್ರೆಸ್ ನಾಯಕರಾದ ಎ.ಕೆ.ಆಂಟನಿ, ಆನಂದ್ ಶರ್ಮ ಮತ್ತು ಪ್ರಮೋದ್ ತಿವಾರಿ ಅವರನ್ನು ಮಾತನಾಡಿಸಿ ನಂತರ ಬಿಎಸ್ಪಿಯ ನಾಯಕರಾದ ಮಾಯಾವತಿ ಮತ್ತು ಸತೀಶ್ ಶರ್ಮ ಅವರನ್ನು ಮಾತನಾಡಿದರು. ಬಿಜೆಡಿಯ ದಿಲೀಪ್ಕುಮಾರ್ ಅವರ ಕೈ ಕುಲುಕಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಸುಖೇಂದು ಶೇಖರ್ ರಾಯ್ ಅವರೊಂದಿಗೆ ಕುಶಲೋಪರಿ ನಡೆಸಿದರು.
ಬಳಿಕ ಎಡಪಕ್ಷ ನಾಯಕರಾದ ಸೀತಾರಾಮ್ ಯೆಚೂರಿ ಮತ್ತು ಟಿ.ಕೆ.ರಂಗರಾಜನ್ ಅವರೊಡನೆ ಮಾತನಾಡಿದರು. ಯೆಚೂರಿ ಮತ್ತು ರಾಮಸ್ವಾಮಿ ಅವರೊಂದಿಗೆ ಮಾತನಾಡುವಾಗ ಆ ನಾಯಕರ ಹೆಗಲ ಮೇಲೆ ಕೈ ಹಾಕಿ ಮೋದಿ ಸ್ನೇಹದಿಂದ ಮಾತನಾಡಿದರು. ಕಲಾಪ ಆರಂಭದ ವೇಳೆಗೆ ಮೋದಿ ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪಕ್ಕದ ತಮ್ಮ ಆಸನದಲ್ಲಿ ಬಂದು ಕುಳಿತರು. ಕೆಲವು ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ಮೋದಿ ಸದನದಲ್ಲಿ ಹಾಜರಿದ್ದರು.