ನವದೆಹಲಿ(ಪಿಟಿಐ): ಪಠಾಣ್ಕೋಟ್ ವಾಯು ನೆಲೆ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ ಬಳಿಕ ಮಂಗಳವಾರ ಭಾರತ–ಪಾಕಿಸ್ತಾನ ನಡುವಿನ ವಿದೇಶಾಂಗ ಕಾರ್ಯದರ್ಶಿಗಳಮಟ್ಟದ ಮೊದಲ ಔಪಚಾರಿಕ ಮಾತುಕತೆಯಲ್ಲಿ ಉಗ್ರರ ದಾಳಿ ಹಾಗೂ ಕಾಶ್ಮೀರ ಸಮಸ್ಯೆಯ ಪ್ರಮುಖ ವಿಷಯಗಳು ಚರ್ಚೆಯಾದವು.
‘ಹಾರ್ಟ್ ಆಫ್ ಏಷ್ಯಾ‘ ಸಮ್ಮೇಳನದಲ್ಲಿ ಭಾಗವಹಿಸಿರುವ ಪಾಕ್ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಅಹ್ಮದ್ ಚೌಧರಿ ಅವರೊಟ್ಟಿಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಔಪಚಾರಿಕ ಮಾತುಕತೆ ನಡೆಸಿದ್ದು, ಕಾಶ್ಮೀರ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ.
ಕಾಶ್ಮೀರ ಸಮಸ್ಯೆ ಆದ್ಯತೆಯ ವಿಷಯವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ ಹಾಗೂ ಕಾಶ್ಮೀರ ಜನರ ಆಶಯಗಳಂತೆ ಪರಿಹಾರ ಬೇಕು ಎಂದು ಚೌಧರಿ ಪ್ರತಿಪಾದಿಸಿದರು ಎಂದು ಮೂಲಗಳು ತಿಳಿಸಿವೆ.
ಆದರೆ, ತಕ್ಷಣಕ್ಕೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.