ನವದೆಹಲಿ: ಮೇ 26ಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನೆಯನ್ನು ಬಿಂಬಿಸುವಂತಾ ಕಾರ್ಯಕ್ರಮಗಳನ್ನು ಬಿತ್ತರಿಸಲು ಪ್ರಧಾನಿ ಮೋದಿ ಸರ್ಕಾರ ಯೋಚಿಸಿದೆ.
ದೂರದರ್ಶನದ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ತಮ್ಮ ಸಂಪುಟ ಸಚಿವ ಸಾಧನೆ ಕುರಿತಂತಾ ಕಾರ್ಯಕ್ರಮ ಬಿತ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಸಚಿವ ಸಂಪುಟ ಮತ್ತು ಕೇಂದ್ರ ಸಚಿವರುಗಳು ತಮ್ಮ ಸಾಧನೆಗಳನ್ನು ಸಂದರ್ಶನದ ಮೂಲಕ ವ್ಯಕ್ತಪಡಿಸಲು ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಚಿವರಿಗೆ ತಮ್ಮ ಸಾಧನೆಗಳ ಪ್ರಮುಖಾಂಶ ಮತ್ತು ಅಭಿವೃದ್ಧಿಯ ವಿಚಾರಗಳನ್ನು ಸಂದರ್ಶನದ ವೇಳೆ ತಿಳಿಸುವಂತೆ ಸೂಚಿಸಿದ್ದಾರೆ ಎಂದು ಸರ್ಕಾರದ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಸಿದ್ಧಪಡಿಸಲು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ , ವಾಣಿಜ್ಯ ಸಚಿವೆ ನಿರ್ಮಲ ಸೀತಾರಾಮ್, ಇಂಧನ ಸಚಿವ ಪಿಯೂಷ್ ಗೋಯಲ್, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನೊಳಗೊಂಡ ತಂಡವನ್ನು ಮೋದಿ ಅವರು ರಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಇಂಧನ ಸಚಿವ ಪಿಯೂಷ್ ಗೋಯಲ್ ಸರ್ಕಾರದ ಮೊದಲ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದರು. ಈ ವೇಳೆ ಸಚಿವರಿಗೆ ತಮ್ಮ ಸಾಧನೆಯನ್ನು ಕಿರು ಚಿತ್ರ ಹಾಗೂ ಡಾಕ್ಯುಮೆಂಟರಿ ಮಾಡುವಂತೆ ಸೂಚಿಸಲಾಗಿತ್ತು.