ಕನ್ನಡ ವಾರ್ತೆಗಳು

“ಅನ್ನಭಾಗ್ಯ”ದ ಹೆಸರಲ್ಲಿ ಕಳಪೆ ಅಕ್ಕಿ ಪೂರೈಕೆ : ಅಕ್ಕಿಯಲ್ಲಿ ಕಸ, ದೂಳು, ಹುಳದ ಗೂಡು ಪತ್ತೆ.

Pinterest LinkedIn Tumblr

raice_warms_found

ಪುತ್ತೂರು, ಏ.20: ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ನ್ಯಾಯಬೆಲೆ ಅಂಗಡಿಗೆ ಕಳಪೆ ಮಟ್ಟದ ಅಕ್ಕಿ ಪೂರೈಕೆ ಮಾಡಲಾಗಿದ್ದು, ಅಕ್ಕಿ ತುಂಬಿದ ಗೋಣಿಯನ್ನು ಬಿಚ್ಚಿದರೆ ರಾಶಿ ರಾಶಿ ಹುಳದ ಗೂಡುಗಳು, ಕಸ, ಧೂಳು ತುಂಬಿಕೊಂಡಿರುವ ಬಗ್ಗೆ ಸ್ಥಳೀಯರು ಆಹಾರ ಇಲಾಖೆಗೆ ದೂರು ನೀಡಿದ್ದಾರೆ.

ಕೆಯ್ಯೂರು ನ್ಯಾಯಬೆಲೆ ಅಂಗಡಿ ಸಂಖ್ಯೆ-18, ಇದು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಡಿಯಲ್ಲಿ ನಡೆಯುತ್ತಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ 115 ಕ್ವಿಂಟಾಲ್ ಕುಚ್ಚಲು ಅಕ್ಕಿ ಈ ನ್ಯಾಯಬೆಲೆ ಅಂಗಡಿಗೆ ಬಂದಿದೆ.

ಎ.11 ರಿಂದ ಆಹಾರ ಸಾಮಾಗ್ರಿಗಳ ವಿತರಣೆ ಮಾಡಲಾಗಿದೆ. ಪ್ರಸ್ತುತ ದಾಸ್ತಾನು ಇರುವ ಬಹುತೇಕ ಎಲ್ಲಾ ಅಕ್ಕಿ ಮೂಟೆಗಳಲ್ಲಿ ಹುಳವಾಗಿದೆ. ಗೋಣಿಯ ಮೇಲ್ಬಾಗದಲ್ಲಿ ಹುಳ ಗೂಡು ಕಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಗೋಣಿಯೊಳಗಿಂದ ಧೂಳು ಚಿಮ್ಮುತ್ತಿದೆ. ಅತ್ಯಂತ ಹಳೆಯ ದಾಸ್ತಾನು ಇದಾಗಿರಬೇಕು ಎಂಬುದು ಸ್ಥಳೀಯರ ಆರೋಪವಾಗಿದೆ.

ಸರಕಾರದ ಅನ್ನಭಾಗ್ಯ ಯೋಜನೆ ಜನರ ಪಾಲಿಗೆ ದೌರ್ಭಾಗ್ಯ ಆಗುವ ಭಯ ಕಾಡುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರಾದ ಪುತ್ತೂರು ತಾಲೂಕು ಬಿ.ಎಸ್.ಪಿ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಎರಕ್ಕಳ ಅವರು ಇದಕ್ಕೆ ಸರಕಾರ ಮತ್ತು ಆಹಾರ ಇಲಾಖಾ ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ತಿಂಗಳ ಅಕ್ಕಿ ಸಂಪೂರ್ಣ ಹಾಳಾಗಿದ್ದು, ಕಸ ಧೂಳು, ತುಂಬಿಕೊಂಡಿದೆ. ಇದನ್ನು ಬೇಯಿಸಿದಾಗ ಬೆಂದ ಅನ್ನವು ಹಳದಿ ಬಣ್ಣಕ್ಕೆ ತಿರುಗುತ್ತಿದೆ.

ಈ ಅನ್ನವನ್ನು ಸೇವಿಸಿದರೆ ಆರೋಗ್ಯ ಹಾಳಾಗಿ ಸಾವು ಖಚಿತ ಎಂದು ದೂರಿನಲ್ಲಿ ಆರೋಪಿಸಿರುವ ಅವರು ಇದಕ್ಕೆ ನ್ಯಾಯಬೆಲೆ ಅಂಗಡಿದಾರರು ಹೊಣೆಯಲ್ಲ, ಈ ಬಗ್ಗೆ ಆಹಾರ ಇಲಾಖಾ ಅಧಿಕಾರಿಗಳು ಹೊಣೆಯಾಗಿದ್ದಾರೆ. ಅಕ್ಕಿ ಸರಬರಾಜು ಮಾಡುವ ಮೊದಲು ಎಲ್ಲಾ ಅಕ್ಕಿ ಮೂಟೆಗಳನ್ನು ಪರಿಶೀಲನೆ ಮಾಡಿಯೇ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.

Write A Comment