ಹೈದರಾಬಾದ್: ತೀವ್ರ ಬಿಸಿಲಿನ ಝಳದಿಂದ ತತ್ತರಿಸುತ್ತಿರುವ ತೆಲಂಗಾಣದಲ್ಲಿ ಈ ಬಾರಿ ಬೇಸಿಗೆ ರಜವನ್ನು ಅವಧಿಗೆ ಮುನ್ನವೇ ನೀಡುವಂತೆ ಅಧಿಕಾರಿಗಳು ಶಾಲೆಗಳಿಗೆ ಆದೇಶ ನೀಡಿದ್ದಾರೆ. ಏ. 24 ರಿಂದ ಬೇಸಿಗೆ ರಜೆಗಳು ಆರಂಭವಾಗಬೇಕಿದ್ದು, ಅದಕ್ಕೆ ಬದಲಾಗಿ ಏ. 17 ರಿಂದಲೇ ಆರಂಭವಾಗಲಿವೆ.
ಈವರೆಗೆ 66 ಜನ ಬಲಿ
ತೆಲಂಗಾಣದಾದ್ಯಂತ ಬಿಸಿಲ ಬೇಗೆಗೆ 66 ಮಂದಿ ಬಲಿಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲೂ ಬಿಸಿಲ ಝಳ ಇದೇ ರೀತಿಯಲ್ಲಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
7 ಮಂದಿ ಸಾವು
ತೆಲಂಗಾಣ ಸರ್ಕಾರದ ಪ್ರಕಾರ ನಲ್ಗೊಂಡಾದಲ್ಲಿ ಇಬ್ಬರು, ಖಮ್ಮಮ್ನಲ್ಲಿ ಐದು ಜನ, ಮೆಹಬೂಬ್ನಗರದಲ್ಲಿ 28 ಮಂದಿ, ಕರೀಂನಗರದಲ್ಲಿ 5, ಮೇಡಕ್ನಲ್ಲಿ 11, ಅದಿಲಾಬಾದ್ನಲ್ಲಿ 4, ವಾರಂಗಲ್ನಲ್ಲಿ 4 ಹಾಗೂ ನಿಜಾಮಾಬಾದ್ನಲ್ಲಿ 7 ಮಂದಿ ಸತ್ತಿದ್ದಾರೆ. ಬಿಸಿಲ ಝಳಕ್ಕೆ ಬಲಿಯಾದವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ, ಅದು ಇನ್ನೂ ಹೆಚ್ಚಾಗಿರಲೂಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೃಷಿ ಕಾರ್ಮಿಕರೇ ಹೆಚ್ಚು
ಸತ್ತವರಲ್ಲಿ ಬಹುತೇಕ ಜನ ವಿಧಿಯಿಲ್ಲದೇ ಉರಿಬಿಸಿಲಲ್ಲಿ ದುಡಿಯಬೇಕಾಗಿರುವ ಕೃಷಿ ಕಾರ್ಮಿಕರು ಮತ್ತು ದಿನಗೂಲಿ ನೌಕರರೆನ್ನಲಾಗಿದೆ. ಕಳೆದ ವರ್ಷ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಿಸಿಲಿಗೆ ಬಲಿಯಾದವರ ಸಂಖ್ಯೆ 500 ದಾಟಿತ್ತು.