ತಿರುವನಂತಪುರಂ: ಕೇರಳದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ, ಆದರೆ ಪಟಾಕಿ ಸಿಡಿಸುವುದರ ಮೇಲೆ ನಿಗಾ ವಹಿಸಲಾಗುವುದು ಮತ್ತು ಹೆಚ್ಚು ಶಬ್ದ ಉಂಟುಮಾಡುವ ಪಟಾಕಿ ಬಳಕೆ ಸಂಬಂಧ ನಿಯಮಾವಳಿ ರೂಪಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ ತಿಳಿಸಿದ್ದಾರೆ.
ಕೊಲ್ಲಂ ದೇವಾಲಯದಲ್ಲಿ ಪಟಾಕಿ ಸಿಡಿದು ಸಂಭವಿಸಿದ ದುರಂತದ ನಂತರ ರಾಜ್ಯದಲ್ಲಿ ಪಟಾಕಿ ಸಿಡಿತವನ್ನು ಸಂಪೂರ್ಣವಾಗಿ ನಿಷೇಧಿಸುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲು ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಹೆಚ್ಚು ಶಬ್ದ ಮಾಡುವ ಪಟಾಕಿ ಬಳಕೆಯನ್ನು ಕಡಿಮೆ ಮಾಡಲು ನಿಯಮಾವಳಿ ರೂಪಿಸಲು ಮತ್ತು ಕಡಿಮೆ ಶಬ್ದ ಮಾಡುವ ಪಟಾಕಿ ಬಳಕೆಗೆ ಉತ್ತೇಜನ ನೀಡುವಂತೆ ಶಾಸಕರು ಸಲಹೆ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲೂ ಸಹ ಹೆಚ್ಚು ಶಬ್ದ ಮಾಡುವ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ನಿಯಮ ಮೀರಿ ಪಟಾಕಿ ಸಿಡಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚಾಂಡಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.