ಮುಂಬೈ: ಆತ್ಮಹತ್ಯೆಗೆ ಶರಣಾಗಿದ್ದ ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಕುಟುಂಬ ಸದಸ್ಯರು ಏ.14 ರಂದು ಬೌದ್ಧ ಧರ್ಮವನ್ನು ಸ್ವೀಕರಿಸಲಿದ್ದಾರೆ.
ಏ.14 ರಂದು ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಜನ್ಮದಿನವಾಗಿದ್ದು, ಇದೇ ದಿನದಂದು ರೋಹಿತ್ ವೇಮುಲಾ ತಾಯಿ, ಸಹೋದರ ಮುಂಬೈ ನಲ್ಲಿ ಬೌದ್ಧ ಧರ್ಮಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಅಂಬೇಡ್ಕರ್ ಅವರ ಮೊಮ್ಮಗ, ಮಾಜಿ ಸಂಸದ ಪ್ರಕಾಶ್ ಅಂಬೇಡ್ಕರ್ ಅವರ ಪ್ರಕಾರ ರೋಹಿತ್ ತಾಯಿ ಹಾಗೂ ಸಹೋದರನಿಗೆ ಬೌದ್ಧ ಭಿಕ್ಷುವೋಬ್ಬರು ದೀಕ್ಷೆ ನೀಡಲಿದ್ದಾರೆ.
ಮಹಾರಾಷ್ಟ್ರದ ದಾದರ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ ನಡೆಯಲಿರುವ ಸಮಾರಂಭದಲ್ಲಿ ರೋಹಿತ್ ವೇಮುಲಾ ತಾಯಿ, ಸಹೋದರನಿಗೆ ಭೌದ್ಧ ಧರ್ಮಗುರುಗಳು ದೀಕ್ಷೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ರೋಹಿತ್ ವೆಮುಲಾ ಅವರ ಕುಟುಂಬ ಸದಸ್ಯರೇ ಮನವಿ ಮಾಡಿದ ಹಿನ್ನೆಲೆಯಲ್ಲಿ ದೀಕ್ಷಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶ್ ಅಂಬೇಡ್ಕರ್ ತಿಳಿಸಿದ್ದಾರೆ.