ಡೆಹ್ರಾಡೂನ್: 2013ರಲ್ಲಿ ಕೇದಾರನಾಥದಲ್ಲಿ ನಡೆದ ಭೀಕರ ಪ್ರವಾಹಕ್ಕೆ ನೂತನವಾಗಿ ವಿವಾಹವಾದ ದಂಪತಿ ಹಾಗೂ ಪಿಕ್ನಿಕ್ಗೆ ಬರುವ ಯುವಕ, ಯುವತಿಯರೇ ಕಾರಣ ಎಂದು ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಆರೋಪ ಮಾಡಿದ್ದಾರೆ.
ಹೌದು, ನವದಂಪತಿಗಳು ಹನಿಮೂನ್ಗಾಗಿ ಕೇದಾರನಾಥಕ್ಕೆ ಆಗಮಿಸಿದರೆ, ಯುವ ಜನತೆ ಪಿಕ್ನಿಕ್ನ ನೆಪದಲ್ಲಿ ಆಗಮಿಸಿ ಮಜಾ ಮಾಡುತ್ತಾರೆ. ಇಲ್ಲಿ ಭಕ್ತಿ ಎರಡನೇಯ ಸಾಲಿಗೆ ಸೇರುತ್ತದೆ. ಇದರಿಂದಾಗಿ ಶಿವ ಮುನಿಸಿಕೊಂಡು ರುದ್ರ ರೂಪ ಪ್ರದರ್ಶಿಸಿದ್ದಾನೆ. ಇದರಿಂದಾಗಿಯೇ 5,000 ಜನರು ಸಾವನ್ನಪ್ಪಿದ್ದಾರೆ. ಇಂತಹ ಚಟುವಟಿಕೆ ಮುಂದುವರೆದರೆ ಮುಂದೆಯೂ ಅಪಾಯ ತಪ್ಪಿದ್ದಲ್ಲ ಎಂದು 94ರ ಹರೆಯದ ಸ್ವಾಮಿಗಳು ಹೇಳಿದ್ದಾರೆ.
ಕಳೆದ ಸೋಮವಾರ ಮಹಾರಾಷ್ಟ್ರದ ಶನಿಶಿಂಗ್ಣಾಪುರ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿದ ಕುರಿತು ಮಾತನಾಡುತ್ತಾ, ಕಳೆದ ನಾಲ್ಕುನೂರು ವರ್ಷಗಳಿಂದ ನಡೆಸಿಕೊಂಡು ಬಂದ ಸಂಪ್ರದಾಯಕ್ಕೆ ಮಹಿಳೆಯರು ಭಂಗ ತಂದಿರುವುದರಿಂದ ಮಹಿಳೆಯರಿಗೆ ಸಂಕಷ್ಟ ಹೆಚ್ಚಾಗಲಿದ್ದು, ಇದರ ಜತೆಗೆ ಮಹಿಳೆಯರ ಅತ್ಯಾಚಾರದ ಸಂಖ್ಯೆ ಕೂಡ ಹೆಚ್ಚಾಗಲಿದೆ ಎಂದು ಸ್ವರೂಪಾನಂದ ಸರಸ್ವತಿ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅಷ್ಟೇ ಅಲ್ಲ, ರಾಜ್ಯದ ಜನತೆ ಶಿರಡಿ ಸಾಯಿಬಾಬರನ್ನು ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ ಪೂಜೆ ಮಾಡದೆ ಇರುವುದರಿಂದ ಮಹಾರಾಷ್ಟ್ರದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದರು.