ಶ್ರೀನಗರ: ಯೋಧರು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಸ್ಥಳೀಯರು ಬುಧವಾರ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಮೂವರು ಯುಕರು ಸಾವನ್ನಪ್ಪಿದ್ದಾರೆ. ಶ್ರೀನಗರ, ಕುಪ್ವಾರ ಜಿಲ್ಲೆಯ ವಿವಿಧೆಡೆ ಕರ್ಫ್ಯೂ ವಿಧಿಸಲಾಗಿದೆ. ಆದರೆ ಯುವತಿ ಮಾತ್ರ ತನಗೆ ಲೈಂಗಿಕ ಕಿರುಕುಳ ನೀಡಿದ್ದು ಯೋಧರಲ್ಲ. ಸ್ಥಳೀಯ ಯುವಕರು ಎಂದು ಹೇಳಿದ್ದಾರೆ.
ನನಗೆ ಯಾವೊಬ್ಬ ಸೈನಿಕನೂ ಲೈಂಗಿಕ ಕಿರುಕುಳ ನೀಡಿಲ್ಲ. ಸ್ಥಳೀಯ ಯುವಕರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಮತ್ತು ಅವರನ್ನು ಪತ್ತೆ ಹಚ್ಚುವುದಾಗಿ ದೌರ್ಜನ್ಯಕ್ಕೆ ಒಳಗಾದ ಯುವತಿ ಹೇಳಿರುವ ವಿಡಿಯೋವನ್ನು ಸೇನೆ ಬಿಡುಗಡೆ ಮಾಡಿದೆ.
ಯುವತಿ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದ ವೇಳೆ ಯೋಧ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸ್ಥಳೀಯರು ಇಂದು ಪ್ರತಿಭಟನೆ ನಡೆಸಿದರು. ಈ ವೇಳೆ ದೇಶ ವಿರೋಧಿ, ಪರ ಸ್ವಾತಂತ್ರ್ಯ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೇ, ಮಿಲಿಟರಿ ಬಂಕರ್ ಗಳಿಗೆ ಕಲ್ಲಿನಿಂದ ದಾಳಿ ನಡೆಸಿ ನಂತರ ಬೆಂಕಿ ಹಚ್ಚಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಮೂವರು ಯುವಕರು ಮೃತಪಟ್ಟಿದ್ದು, ಮಹಿಳೆ ಸೇರಿ ಮೂವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ